Friday, November 28, 2014

ಕೆಲವ್ರಿಗೆ ವುಲನ್ ಟೋಪಿ... ಹಲವ್ರಿಗೆ ಮಕಮಲ್​ದು...

ಕೈಲಾಗದೋನು ಮೈ ಪರಚಿಕೊಂಡ ಅಂತ ಒಂದ್ ಗಾದೆ ಇದೆ. ಬಹಶಃ ಈ ವಿಷ್ಯಕ್ಕೂ ಈ ಗಾದೆಗೂ ಏನೂ ಸಂಬಂಧವಿಲ್ದೇ ಇರಬೋದು. ಆದ್ರೆ ಸಮೀಪದ ಸಂಬಂಧ ಅಂತೂ ಇದೆ. ಇಷ್ಟು ದಿನ ಕೇಂದ್ರದಲ್ಲಿ ಅಥವಾ ರಾಜ್ಯಗಳಲ್ಲೇ ಆಗ್ಲಿ ಅಧಿಕಾರದ ಚುಕ್ಕಾಣಿ ಹಿಡಿಯೋಕೆ ‘ಜನಪ್ರತಿನಿಧಿ'ಗಳು ಅಂತ ಅನಿಸಿಕೊಂಡವರು / ಅನಿಸಿಕೊಳ್ಳುವವರು ಜನರಿಗೆ ವುಲನ್ ಟೋಪಿ ಹಾಕ್ತಾ ಇದ್ರು. ಆದ್ರೆ ಅದ್ಯಾವ ಘಳಿಗೇಲಿ ‘ನಮ್ಮ' ಮೋದಿ ಸಾಹೇಬ್ರು ಅಖಾಡಕ್ಕೆ ಬಂದ್ರೋ, ನೋಡಿ ಖದರೇಽ ಬೇರಾಯ್ತು. ಮಕಮಲ್ ಟೋಪಿ ಹಾಕೋಕ್ ಶುರು ಮಾಡಿದ್ರು. ಜನ್ರಿಗೂ ವುಲನ್ ಟೋಪಿ ಹಾಕ್ಕಂಡೂ ಹಾಕ್ಕಂಡೂ ಬೇಜಾರಾಗಿತ್ತು. ಅವ್ರು ವುಲನ್​ನಿಂದ ಮಕಮಲ್​ಗೆ ಶಿಫ್ಟ್. ಇಲ್ಲಿ ನನಗೆ ಮೋದಿ ಅಂದ್ರೆ ದ್ವೇಷ ಏನೂ ಇಲ್ಲ. ಇಲ್ಲಿವರ್ಗೂ ಎಲ್ಲಾ ರಾಜಕಾರಣಿಗಳು ಮಾಡ್ತಾ ಇದ್ದಿದ್ನೇ ಇವ್ರೂ ಮಾಡಿದಾರೆ ಅಷ್ಟೇ. ಆದ್ರೆ ಸ್ವಲ್ಪ ಕಲರ್​ಫುಲ್​ ಆಗಿ ಮಾಡಿದಾರೆ. ಇದ್ರಲ್ಲಿ ತಮ್ಮ ಚಾಣಾಕ್ಷತೆ ಮೆರೆದಿದಾರೆ.

ಇಲ್ಲಿ ನಿಜವಾಗ್ಲೂ ಮಂಕೆಗಳಾಗಿದ್ದು ಮಾತ್ರ ಜನ್ರೇ. ಪದೇ ಪದೇ ರಾಜಕಾರಣಿಗಳ ಪೊಳ್ಳು ಭರವೆಸೆಗಳನ್ನ ಕೇಳ್ತಾ ಇರ್ತೀವಿ. ಅವು ಈಡೇರಲ್ಲ ಅನ್ನೋದು ನಮ್ಗೆ ಗೊತ್ತೂ ಇರತ್ತೆ. ಆದ್ರೂ ನಾವು ಈ ಭರವಸೆಗಳ ಬುನಾದಿ ಮೇಲೆಯೇ ಬದುಕೋಕೆ ಆಸೆ ಪಡ್ತೀವಿ. ಹಿಂದಿನವ್ರು ಕೊಟ್ಟ ಭರವಸೆಗಳೆಲ್ಲಾ ಈಡೇರಿದೋ ಅಷ್ಟ್ರಲ್ಲೇ ಇದೆ. ಆದ್ರೂ 2014ರ ಲೋಕಸಭೆ ಚುನಾವಣೆ ಟೈಮ್ನಲ್ಲಿ ಮೋದಿ ಅತೀ ಹೆಚ್ಚು ಹೇಳಿದ್ದು ಕಪ್ಪು ಹಣದ ಬಗ್ಗೆ. ವಿದೇಶದಲ್ಲಿರೋ ಕಪ್ಪು ಹಣನಾ ಅಧಿಕಾರಕ್ಕೆ ಬಂದ್ರೆ 100 ದಿನದಲ್ಲಿ ವಾಪಸ್ ತರ್ತೀನಿ ಅಂತ ಹೇಳಿದ್ರು. ಅಲ್ಲ... ಭರವಸೆ ಕೊಟ್ರು. ತಾಂತ್ರಿಕವಾಗಿ ಅದು ಸಾಧ್ಯ ಇಲ್ಲ ಅನ್ನೋದು ಮೋದಿ ಭಾಷಣ ಕೇಳಿದ ಮತ್ತು ಕೇಳದವರಿಗೂ ಗೊತ್ತಿರೋ ವಿಷ್ಯವೇ. ಆದ್ರೂ ‘ಅದನ್ನ ನಾವೆಲ್ಲಾ ನಂಬಿದ್ವಿ'.

ಈಗ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದು 100 ದಿನ ಕಳೆದಾಯ್ತು. ಆದ್ರೆ ಇನ್ನೂ ವಿದೇಶದಲ್ಲಿರೋ ಕಪ್ಪು ಹಣ ಮಾತ್ರ ಭಾರತಕ್ಕೆ ಬಂದಿಲ್ಲ. ಬಹುಶಃ ಇನ್ನೂ ಹಲವು ತಿಂಗಳು ಅಥವಾ ಹಲವು ವರ್ಷಗಳಾದ್ರೂ ಆ ಬ್ಲಾಕ್ ಮನಿ ವಾಪಸ್ ಬರುತ್ತೆ ಅನ್ನೋ ನಂಬಿಕೆನೂ ಇಲ್ಲ. ಆದ್ರೂ ಕೆಲವರು ಇನ್ನೂ ಅದೇ ಹಳೇ ಗುಂಗಿನಲ್ಲೇ ಇದ್ದಾರೆ. ತಡವಾದ್ರೂ ನಮ್ಮ ಮೋದಿ ಕಪ್ಪು ಹಣವನ್ನ ಭಾರತಕ್ಕೆ ತಂದೇ ತರ್ತಾರೆ ಅಂತ ನಂಬಿದ್ದಾರೆ. ಇನ್ನು ಕೆಲವರು ಇದು ಸಾಧ್ಯವೇ ಇಲ್ಲ ಅಂತಲೂ ವಾದ ಮಾಡ್ತಾ ಇದ್ದಾರೆ. ಯಾವ್ದು ಏನೇ ಆದ್ರೂ, ಮೋದಿ ಮಾತ್ರ ತಮ್ಮ ಅದೇ ಲಹರಿಯಲ್ಲಿ ಜೋರು ಭಾಷಣಗಳಲ್ಲಿ, ಹಲವು ರಾಜ್ಯಗಳ ವಿಧಾನಸಭೆ ಚುನಾವಣಾ ಪ್ರಚಾರಗಳಲ್ಲಿ ಬ್ಯುಸಿ... ಬ್ಯುಸಿ... ಬ್ಯುಸಿ...

ಅಂದ್ಹಾಗೆ... ನೋಡ ನೋಡ್ತಿದ್ದಂತೆ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ವರ್ಷ ಕಳೀಯೋಕೆ ಸ್ವಲ್ಪವೇ ಸಮಯ ಉಳಿದಿದೆ. ಇನ್ನು ಹಾಗೇ, ಬಯ್ಯುತ್ತಾ, ಅವ್ರನ್ನ ಇವ್ರು, ಇವ್ರನ್ನ ಅವ್ರು ಟೀಕಿಸ್ತಾ ಅದ್ಹೇಗೋ ಕಣ್ಮುಚ್ಚಿ ತೆಗಿಯೋದ್ರೊಳಗೆ 5 ವರ್ಷನೂ ಪೂರ್ಣಗೊಳಿಸೇ ಬಿಡ್ತಾರೆ. ಆದ್ರೆ ಚುನಾವಣೆಯ ಪ್ರಚಾರದ ವೇಳೆ ನೀಡಿದ ಅದಷ್ಟೋ ಭರವಸೆಗಳು ಇನ್ನೂ ಹಾಗೇ ಇರ್ತವೆ. ಆಗ ಮತ್ತೆ ಇವ್ರುಗಳೇ ನಮ್ಮ ಮುಂದೆ ಪ್ರತ್ಯಕ್ಷರಾಗ್ತಾರೆ. ಆಗ ನಮ್ಮ ಮತ್ತೆ ಮೋದಿ ಆಥವಾ ಮೋದಿಯಂಥವರು, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಇನ್ನು ಹಲವು ಘಟಾನುಘಟಿ ನಾಯಕರು ಮತ್ತೆ ಪ್ರತ್ಯಕ್ಷವಾಗ್ತಾರೆ. ಅದೇ ಭರವಸೆಗಳು, ಆಶ್ವಾಸನೆಗಳು, ಕೆಲವರು ವುಲನ್ ಟೋಪಿ, ಹಲವರು ಮಕಮಲ್ ಟೋಪಿ. ಬದಲಾವಣೆಯನ್ನು ಬಯಸುವ ನಮ್ಮ ಬುದ್ಧಿವಂತ ಮತದಾರ ತಾನು ಮಾತ್ರ ಬದಲಾಗದೇ ಮತ್ತೆ ಮತ್ತೆ ತನ್ನ ತಲೆ ಹೊಸ ಟೋಪಿಗಾಗಿ ಸಿದ್ಧಪಡಿಸ್ಕಂಡೇ ಇರ್ತಾನೆ...


ನವೀ...

Tuesday, April 8, 2014

ಇವಳು ಅಮ್ನಾ ಭಟ್ಟಿ, ಪಾಕಿಸ್ತಾನದವಳು..

  My Article published in Avadi on April-4, 2014

ಇವಳು ಅಮ್ನಾ ಭಟ್ಟಿ, ಪಾಕಿಸ್ತಾನದವಳು..

April 4, 2014
by user2

ನವೀನ್ ಕುಮಾರ್ ಕೆ

ಜೀತ ಪದ್ದತಿಯ ಬಗ್ಗೆ ಎಷ್ಟೆಲ್ಲಾ ಹೋರಾಟಗಳು, ಎಷ್ಟೆಲ್ಲಾ ಪ್ರಯತ್ನಗಳ ನಂತರ ಅದಕ್ಕೆ ಜಾಗತಿಕವಾಗಿ ಮುಕ್ತಿ ಸಿಕ್ಕಿತ್ತು. ಆದರೆ ನಿಜವಾಗಿಯೂ ಜೀತ ಪದ್ದತಿ ಇಂದು ನಮ್ಮಲ್ಲಿ ಇಲ್ಲವೆ? ಜನರು ನಿಜವಾಗಿಯೂ ಇದರ ಕೂಪದಿಂದ ಹೊರ ಬಂದಿದ್ದಾರೆಯೇ? ಬಂದಿಲ್ಲ ಅಂದರೆ ಜೀತ ಪದ್ದತಿ ಈಗ ಯಾವ ರೂಪದಲ್ಲಿ ಇದೆ? ಹೀಗೆ ಹಲವು ಪ್ರಶ್ನೆಗಳು ಹುಟ್ಟಿಕೊಳ್ಳುತ್ತಾ ಹೋಗುತ್ತದೆ. ಅದರಲ್ಲೂ ಜೀತ ಅನ್ನೋದು ಹಿಂದುಳಿದ ದೇಶಗಳಲ್ಲಂತೂ ಕಂಡೂ ಕಾಣದಂತೆ ಹೆಮ್ಮರವಾಗಿ ಬೆಳೆದು ನಿಂತಿದೆ. ಅಥವಾ ಇದರ ಬಗ್ಗೆ ಗೊತ್ತಿದ್ದರೂ, ಅಲ್ಲಿನ ಕಾನೂನು, ಆಡಳಿತ ಇದನ್ನು ನಿರ್ಲಕ್ಷಿಸಿವೆ.  ಇದು ಇಂದು ನಮ್ಮ ಮುಂದಿರುವ ಕಠೋರ ಸತ್ಯ.
ಇದಕ್ಕೆ ಉತ್ತಮ ಉದಾಹರಣೆ ನಮ್ಮ ನೆರೆಯ ದೇಶ ಪಾಕಿಸ್ತಾನ. ಪಾಕಿಸ್ತಾನ ಎಂದ ಕೂಡಲೇ ನಾವು ಮೈ ಮೇಲೆ ಹಾವು ಹರಿದಂತೆ ಆಡುತ್ತೇವೆ. ಆದರೆ ಅಲ್ಲಿರುವವರು ಮನುಷ್ಯರೇ. ಅವರಿಗೂ ಮನಸ್ಸಿದೆ, ಕಷ್ಟ ಸುಖಗಳಿವೆ ಎಂಬುದನ್ನು ಆಲೋಚಿಸುವುದೇ ಇಲ್ಲ. ಸರಿ, ಯಾವುದೋ ರಾಜಕೀಯ ಕಾರಣಕ್ಕೆ ಅಥವಾ ರಕ್ಷಣೆಯ ಕಾರಣಕ್ಕೆ ನಾವು ನಮ್ಮ ನೆರೆಯ ದೇಶಗಳನ್ನು ಎಚ್ಚರಿಕೆಯಿಂದ ಗಮನಿಸುವುದು ಉತ್ತಮವೇ. ಆದರೆ ಬರೀ ದ್ವೇಷವನ್ನೇ ತುಂಬಿಕೊಳ್ಳುವುದು ಎಷ್ಟು ಸೂಕ್ತ? ಇದು ಕೇವಲ ನನಗೋ, ನಿಮಗೋ ಅಥವಾ ಭಾರತೀಯರಿಗಷ್ಟೇ ಸಂಬಂಧಿಸಿದ್ದಲ್ಲ. ಎರಡೂ ದೇಶಕ್ಕೆ ಸಂಬಂಧಿಸಿದ್ದು. ಇನ್ನು ನಾನು ಇಲ್ಲಿ ಹೇಳ ಹೊರಟಿರುವ ಜೀಪ ಪದ್ದತಿ ಅಥವಾ ಗುಲಾಮ ಪದ್ದತಿ ಈಡೀ ಜಗತ್ತಿಗೇ ಸಂಬಂಧಿಸಿದ್ದು.
ಪಾಕಿಸ್ತಾನದಲ್ಲಿ ಸಾವಿರಾರು ಜನ ಇಂದಿಗೂ ಈ ಗುಲಾಮ ಪದ್ದತಿಯಿಂದ ಮುಕ್ತಿ ಪಡೆದಿಲ್ಲ. ಅದರಲ್ಲೂ ಈ ಬಾಲಿಶತನಕ್ಕೆ ಬಲಿಯಾಗುತ್ತಿರುವುದು ಮಹಿಳೆಯರು ಎಂಬುದು ದು:ಖಕರ ಸಂಗತಿ. ಆದರೆ ಇಲ್ಲಿ ಜೀತ ಪದ್ದತಿ ಅಥವಾ ಗುಲಾಮಗಿರಿ ಅನ್ನೋದು ನೇರವಾಗಿ ನಡೆಯೋದಿಲ್ಲ. ಅದು ತನ್ನ ಚಹರೆಯನ್ನು ಬದಲಿಸಿಕೊಂಡಿದೆ. ಇಲ್ಲಿನ ಇಟ್ಟಿಗೆ ಫ್ಯಾಕ್ಟರಿ, ಕಾರ್ಪೆಟ್ ತಯಾರಿಕಾ ಕಂಪನಿಗಳು ಮತ್ತು ಕೃಷಿಯಲ್ಲಿ ಇಂದಿಗೂ ಜೀತದಾಳುಗಳಾಗಿ ದುಡಿಯುತ್ತಿದ್ದಾರೆ. ಅವರ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ಯಾವ ಸಕರ್ಾರವೂ, ಯಾವ ಕಾನೂನೂ ಕಿವಗೆ ಹಾಕಿಕೊಂಡಿಲ್ಲ. ಇನ್ನು ಇದನ್ನೆಲ್ಲಾ ಗಮನಿಸಿ ಸೂಕ್ತ ಕ್ರಮ ಕೈಗೊಳ್ಳುವುದಂತೂ ದೂರದ ಮಾತು.
ಇವರೆಲ್ಲಾ ಈ ಪಡಂಭೂತಕ್ಕೆ ಬಲಿಯಾಗುತ್ತಿರೋದು, ಬಂಧಿತ ಕಾರ್ಮಿಕರಾಗಿ. ಗುಲಾಮಗಿರಿ ತನ್ನ ಮುಖವಾಡವನ್ನು ಬಾಂಡೆಡ್ ಲೇಬರ್ ರೂಪದಲ್ಲಿ ಬದಲಿಸಿಕೊಂಡು ಇವರ ಮೇಲೆ ಇಂದಿಗೂ ಹೇರಲ್ಪಟ್ಟಿದೆ. ಕುಟುಂಬದ ಯಜಮಾನರ್ಯಾರೋ ಮಾಡುವ ಸಾಲವನ್ನು ತೀರಿಸೋದಕ್ಕಾಗಿ ಇವರು ತಮ್ಮ ಜೀವನ ಪೂರ್ತಿ ಅವರ ಒಡೆಯರ ಕಣ್ಗಾವಲಲ್ಲೇ ಕಳೆಯಬೇಕು. ಗಂಡ ಯಾವುದೋ ಕಾರಣಕ್ಕೆ ಸಾಲ ಮಾಡಿಕೊಂಡು, ಅಚಾನಕ್ಕಾಗಿ ಮೃತಪಟ್ಟರೆ, ಆತನ ಹೆಂಡತಿ ಜೀವನ ಪೂರ್ತಿ ಸಾಲ ಕೊಟ್ಟವನ ಅಡಿಯಾಳು. ಇದು ಇಲ್ಲಿಗೇ ಮುಗಿಯುವುದಿಲ್ಲ. ಆಕೆಯ ನಂತರ ಮತ್ತೆ, ಆಕೆಯ ಮಕ್ಕಳು, ಅವರ ಹೆಂಡಿರು ಹೀಗೇ ಕೊಂಡಿ ಬೆಳೆಯುತ್ತಾ ಸಾಗುತ್ತದೆ. ಆದರಲ್ಲೂ ಈ ಜೀತಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿರುವುದು ಮಹಿಳೆಯರು.
ಆಮ್ನಾ ಭಟ್ಟಿ ಅನ್ನೋ ಮಹಿಳೆ ತನ್ನ ಅರ್ಧ ಆಯುಷ್ಯವನ್ನು ಜೀತ ಮಾಡುವುದರಲ್ಲೇ ಕಳೆದು ಬಿಟ್ಟಿದ್ದಾಳೆ. 60 ವರ್ಷದ ಆಮ್ನಾ ಮೊಟ್ಟ ಮೊದಲು ಬಂಧಿತ ಕಾರ್ಮಿಕಳಾಗಿ ಇಟ್ಟಿಗೆಯ ಭಟ್ಟಿಗೆ ಬಂದಾಗ ಆಕೆಯ ವಯಸ್ಸು, ಬರೀ 10 ವರ್ಷ. ಅಂದು ತನ್ನ ತಂದೆ ಮಾಡಿದ್ದ ಸಾಲವನ್ನು ತೀರಿಸೋದಕ್ಕಾಗಿ ಇಲ್ಲಿ ಕೆಲಸಕ್ಕೆ ಸೇರಿದಾಕೆ, ಇಂದಿಗೂ ದುಡಿಯುತ್ತಲೇ ಇದ್ದಾಳೆ. ತಂದೆಯ ನಂತರ ಗಂಡ ಮಾಡಿದ ಸಾಲವನ್ನು ತೀರಿಸೋದು, ಅದೂ ಆದ ಮೇಲೆ ತಾನೇ ಮಾಡಿಕೊಂಡ ಸಾಲವನ್ನು ತೀರಿಸೋದು, ಹೀಗೆ ಒಂದಿಲ್ಲೊಂದು ಕೋಲಕ್ಕೆ ಕೈ ಒಡ್ಡುತ್ತಾ ತನ್ನ ಜೀವನವನ್ನು ಜೀತದಾಳಾಗಿ ಈಕೆ ಕಳೆದುಬಿಟ್ಟಿದ್ದಾಳೆ. ತನ್ನ ಮೇಲಿದ್ದ ಎರಡೂ ವರೆ ಲಕ್ಷ ಸಾಲವನ್ನು ತೀರಿಸಲು ಕೆಲಸಕ್ಕೆ ಬಂದಳು, ಇಲ್ಲಿಯವರೆಗೂ ಆಕೆ ತೀರಿಸಿರೋದು ಬರೀ ಒಂದು ಲಕ್ಷ ಮಾತ್ರ. ದಿನವೆಲ್ಲಾ ಕಷ್ಟ ಪಟ್ಟು ದುಡಿದರೆ ಇವರ ಕಷ್ಟದ ಪ್ರತಿಫಲ 350 ರೂಪಾಯಿ ಮಾತ್ರ. ಇದರಲ್ಲೇ ಸಾಲವನ್ನು ತೀರಿಸಿ, ಕುಟುಂಬ ನಿರ್ವಹಣೆಯನ್ನು ಮಾಡಬೇಕಾದ ಅನಿವಾರ್ಯತೆ ಇವರದು. ಹಾಗಾಗಿ ಇರುವ ಸಾಲವನ್ನು ತೀರಿಸೋದು ದೂರದ ಮಾತು ಬದುಕಲು ಮತ್ತೆ ಹೊಸ ಸಾಲವನ್ನು ಮಾಡಲೇಬೇಕಾದ ಪರಿಸ್ಥಿತಿ. ಬೇರೆ ದಾರಿ ಇಲ್ಲದೆ ಸಾಲ ಮಾಡುತ್ತಾರೆ. ಅದನ್ನು ತೀರಿಸಲು ಸಾಧ್ಯವಾಗದೇ ಮತ್ತೆ ಅಲ್ಲೇ ಕೆಲಸ ಮಾಡುತ್ತಾರೆ. ಹಾಗಾಗಿ ಅವರು ಬದುಕಿರುವಷ್ಟು ಕಾಲವೂ ಒಡೆಯರ ದಬ್ಬಾಳಿಕೆಯಡಿ, ಅವರ ಕಾಲ ಕಸದಂತೆ ಬದುಕುವುದು ಇವರಿಗೆ ತಪ್ಪಿದ್ದಲ್ಲ. ಇನ್ನು ಇಲ್ಲಿಂದ ತಪ್ಪಿಸಿಕೊಂಡು ಹೋಗಲೂ ಇವರಿಗೆ ಸಾಧ್ಯವಿಲ್ಲ. ಸದಾ ಇವರ ಮೇಲೆ ನಿಗಾ ಇಡಲಾಗಿರುತ್ತದೆ. ನಾವು ಬಡವರಾಗಿ ಹುಟ್ಟಿದ್ದೇವೆ, ಸಾಯುವವರೆಗೂ ಬಡವರಾಗೇ ಇರುತ್ತೇವೆ, ನಮ್ಮ ಹಣೆ ಬರಹ ಬದಲಾಗುವುದಿಲ್ಲ ಅನ್ನೋದು ಆಮ್ನಾ ಭಟ್ಟಿಯವರ ದು:ಖದ ನುಡಿಗಳು.
ಇನ್ನು ಈ ಜೀತ ಪದ್ದತಿಗೆ ದಾರಿ ಮಾಡಿಕೊಡುತ್ತಿರುವ ಮತ್ತೊಂದು ಕಾರಣವೆಂದರೆ ಹ್ಯೂಮನ್ ಟ್ರಾಫಿಕಿಂಗ್. ಹೌದು ಮಾನವ ಸಾಗಣೆಯೂ ಇಂದು ತನ್ನ ಬೇರುಗಳನ್ನು ತುಂಬಾ ಆಳವಾಗಿ ಚಾಚಿಕೊಂಡಿದೆ. ಈ ಕರಾಳ ದಂಧೆಯನ್ನು ಕಾನೂನು ನಿಷೇಧಿಸಿದ್ದರೂ, ಅದು ತನ್ನ ಸ್ವರೂಪವನ್ನು ಬದಲಿಸಿಕೊಂಡು ಇಂದಿಗೂ ಮುಂದುವರೆಯುತ್ತಿದೆ. ಬಹುತೇಕರು ಒಳ್ಳೆಯ ಉದ್ಯೋಗ ಪಡೆಯುವ ಉದ್ದೇಶದಿಂದ ಸಾಲ ಪಡೆದು ಹಣ ಕಟ್ಟುತ್ತಾರೆ. ಆದರೆ ಮಧ್ಯವರ್ತಿಗಳು ಇವರಿಗೆ ಉದ್ಯೋಗ ಆಸೆ ತೋರಿಸಿ, ಇವರನ್ನು ಮಾರಾಟ ಮಾಡುತ್ತಾರೆ. ಇನ್ನು ಉತ್ತಮ ನೌಕರಿಯ ಕನಸು ಹೊತ್ತು ವಿದೇಶಕ್ಕೆ ಹಾರುವ ಈ ಅಮಾಯಕರು, ಅತ್ತ ಕೆಲಸವೂ ಇಲ್ಲದೆ, ಮಾಡಿದ ಸಾಲವನ್ನು ತೀರಿಸಲೂ ಆಗದೇ, ಕೊನೆಗೆ ಜೀವನ ಪೂರ್ತಿ ಗುಲಾಮರಾಗಿ ಬಾಳುವ ಅನಿವಾರ್ಯತೆ ಸೃಷ್ಠಿಯಾಗುತ್ತದೆ. ಹೀಗೆ ಗುಲಾಮರಾಗಿಸಿಕೊಂಡವರನ್ನು, ಆಫ್ರಿಕಾ, ಕೆರಬಿಯನ್ ದೇಶಗಳು ಮತ್ತು ದಕ್ಷಿಣ-ಪೂರ್ವ ಏಷಿಯಾಗಳಲ್ಲಿ ಜೀತದಾಳುಗಳನ್ನಾಗಿ ಮಾಡಿಕೊಂಡು ದುಡಿಸಿಕೊಳ್ಳುತ್ತಾರೆ. ಇವರುಗಳು ಇಲ್ಲಿಂದ ತಪ್ಪಿಸಿಕೊಂಡು ಬರೋದಂತೂ ದುಸ್ಸಾಧ್ಯವೇ ಸರಿ. ಇವೆಲ್ಲದರ ಜೊತೆಜೊತೆಗೆ ದಕ್ಷಿಣ-ಪೂರ್ವ ಏಷಿಯಾದಲ್ಲಿ ಇಂದಿಗೂ ಜಾರಿಯಲ್ಲಿರುವ ಅನಿಷ್ಟ ಜಾತಿ ಪದ್ದತಿಯೂ ಸಹ ದಲಿತ ವರ್ಗದವರನ್ನು ಮೇಲ್ಜಾತಿ ಮತ್ತು ವರ್ಗದವರು ಅಡಿಯಾಳುಗಳಾಗಿಸಿಕೊಳ್ಳಲು ಸಹಕರಿಸುತ್ತಿದೆ. ಇನ್ನು ಭಾರತಕ್ಕೆ ಬರೋದಾದರೆ, ಇಂದಿಗೂ ಪಂಜಾಬಿನ ಅನೇಕ ಕಡೆಗಳಲ್ಲಿ ಈ ಬಾಂಡೆಡ್ ಲೇಬರ್ ಪದ್ದತಿ ಜಾರಿಯಲ್ಲಿರುವುದನ್ನು ನಾವು ಗಮನಿಸಬಹುದು. ಇಲ್ಲಿ ಗಂಡಸು, ಹೆಂಗಸು ಮಕ್ಕಳು ಎಂಬ ಬೇಧ, ಭಾವಗಳಿಲ್ಲದೆ, ಸಾವಿರಾರು ಮಂದಿ ಜೀತದಾಳುಗಳಾಗಿ ನಿತ್ಯವೂ ಕ್ವಾರಿಗಳಲ್ಲಿ, ಇಟ್ಟಿಗೆ ಭಟ್ಟಿಗಳಲ್ಲಿ ಮಾಲಿಕ ದೌರ್ಜನ್ಯದ ನಡುವೆಯೇ ರಕ್ತವನ್ನು ಬೆವರಿನಂತೆ ಬಸಿದು ದುಡಿಯುತ್ತಿದ್ದಾರೆ. ಆದರೂ ಇವರ ಸಾಲ ತೀರಿಲ್ಲ.
ಇವರ ಕಷ್ಟಗಳು ಕೊನೆಗೊಂಡಿಲ್ಲ. ಹೀಗೆ ನಿರಂತರವಾಗಿ ಮಹಿಳೆಯರ ಮೇಲೆ, ಮಕ್ಕಳ ಮೇಲೆ ಮತ್ತು ಶೋಷಿತ/ದಮನಿತ ವರ್ಗದ ಮೇಲೆ ದೌರ್ಜನ್ಯ, ದಬ್ಬಾಳಿಕೆಗಳು, ಶೋಷಣೆಗಳು ನಡೆಯುತ್ತಲ್ಲೇ ಇದೆ. ಇದು ಕೇವಲ ಪಾಕಿಸ್ತಾನ, ಭಾರತದ ಸಮಸ್ಯೆಯಲ್ಲ. ಆಧುನಿಕತೆಯ ಭರಾಟೆಯಲ್ಲಿ ಎಲ್ಲವೂ ತಮ್ಮ ಸ್ವರೂಪಗಳನ್ನು ಬದಲಿಸಕೊಂಡಿವೆ. ಹಾಗೆಯೇ ಈ ಜೀತ/ಗುಲಾಮ ಪದ್ದತಿಯೂ ಕೂಡ. ಇಂದು ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಅಂದಾಜಿಸುವ ಪ್ರಕಾರ ಕೇವಲ ಏಷಿಯಾ-ಪೆಸಿಫಿಕ್ ಪ್ರಾಂತ್ಯದಲ್ಲೇ ಸುಮಾರು 11.7 ಮಿಲಿಯನ್ ಜನರು ಈ ಬಾಂಡೆಡ್ ಲೇಬರ್ಗೆ ಬಲಿಪಶುವಾಗಿದ್ದಾರೆ. ಆದರೂ ಯಾವ ದೇಶದ ಕಾನೂನು, ಆಡಳಿತವೂ ಇದರ ವಿರುದ್ಧ ಕ್ರಮ ಕೈಗೊಂಡಿಲ್ಲ. ಇನ್ನಾದರೂ ನಾವುಗಳು ಎಚ್ಚೆತ್ತುಕೊಂಡು ಇದನ್ನು ಸೂಕ್ಷ್ಮವಾಗಿ ಗಮನಿಸುವ ಅವಶ್ಯಕತೆ ಇದೆ. ಇದರ ವಿರುದ್ಧ ಸಿಡಿದೇಳದಿದ್ದರೆ, ಇಂದು ಯಾರನ್ನೋ ಕಂಡು ಮರುಕ ಪಡುತ್ತಿರುವ ನಮ್ಮನ್ನು ನೋಡಿ ಮುಂದೊಂದು ದಿನ ಬೇರೆಯವರು ಕನಿಕರ ಪಡುವಂಥ ಸ್ಥಿತಿ ಎದುರಾದೀತು.

ಚಿತ್ರ ಕೃಪೆ : ಮೊಹಮ್ಮದ್ ಮುಹೆಸಿನ್

Tuesday, January 14, 2014

ಸಾಯಿಸೋದಷ್ಟೇ ಅಲ್ಲ… ಹುಟ್ಟಿಸೋದೂ ಅಪರಾಧವೇ…!

ಅವಧಿಯಲ್ಲಿ 13-01-2014ರಂದು ಪ್ರಕಟಗೊಂಡ "ನನ್ನನ್ನು ಕಾಡಿದ ಸಿನಿಮಾ" ಬೋಲ್ ಕುರಿತ ನನ್ನ ಅನಿಸಿಕೆ...

 

ಸಾಯಿಸೋದಷ್ಟೇ ಅಲ್ಲ… ಹುಟ್ಟಿಸೋದೂ ಅಪರಾಧವೇ…!

ನವೀನ್ ಕುಮಾರ್ ಕೆ

ನಾಯಕಿಯ ಕ್ಷಮಾದಾನವನ್ನು ರಾಷ್ಟ್ರಪತಿಗಳು ತಿರಸ್ಕರಿಸಿ ಆಕೆಗೆ ವಿಧಿಸಿರುವ ಗಲ್ಲುಶಿಕ್ಷೆ ಜಾರಿಗೊಳಿಸಲು ಆದೇಶಿಸುವುದರೊಂದಿಗೆ ಶುರುವಾಗುವ ಸಿನಿಮಾ ಉರ್ದು ಭಾಷೆಯ ಬೋಲ್. ಪಕಿಸ್ತಾನದಲ್ಲಿ 24 ಜೂನ್ 2011, ರಂದು ಬಿಡುಗಡೆಗೊಂಡು ಬಕ್ಸ್ ಆಫೀಸ್ನ ಎಲ್ಲಾ ಹಳೆಯ ದಾಖಲೆಗಳನ್ನು ಮುರಿದು ಯಶಸ್ಸು ಪಡೆದ ಸಿನಿಮಾ ಇದು.
ಚಿತ್ರದ ನಾಯಕಿ ಜೈನಾಬ್ (ಹುಮೈಮಾ ಮಲ್ಲಿಕ್)ಳ ಕ್ಷಮಾದಾನ ಅರ್ಜಿ ವಜಾಗೊಂಡಾಗ ಆಕೆಯ ಕೊನೆ ಇಚ್ಛೆಯಾಗಿ ಮಾಧ್ಯಮಗಳ ಎದುರು ತನ್ನ ಜೀವನದ ಕಥೆಯನ್ನು ಹೇಳಲು ಅವಕಾಶ ಕಲ್ಪಿಸಿ ಎಂದು ಕೇಳಿಕೊಂಡಿರುತ್ತಾಳೆ. ಅದಕ್ಕೆ ರಾಷ್ಟ್ರಪತಿಗಳ ಅಂಕಿತ ಬಿದ್ದು ಜೈನಾಬ್ ತನ್ನ ಕಥೆಯನ್ನು ಹೇಳುವುದರೊಂದಿಗೆ ಈ ಚಿತ್ರ ಪ್ರಾರಂಭಗೊಳ್ಳುತ್ತದೆ. ಒಟ್ಟು ಏಳು ಜನ ಅಕ್ಕ-ತಂಗಿಯರು ಮತ್ತು ತಂದೆ ತಾಯಿಯ ಈ ಸಂಸಾರದ ಕಥೆ ಇನ್ನೊಂದು ಮಗುವಿನ ಜನನದೊಂದಿಗೆ ಇನ್ನಷ್ಟು ಕರುಣಾಜನಕವಾಗುತ್ತಾ ಹೋಗುತ್ತದೆ. ಲಕನೌದ ನವಾಬ್ ಮನೆತದವರಾದ ಹಕೀಮ್ ಸಾಬ್(ಮಂಜರ್ ಸೆಹಬಾಯ್)ನ ಅಜ್ಜ ಭಾರತ ಪಾಕಿಸ್ತಾನ ಇಬ್ಭಾಗವಾದಾಗ ಲಾಹೋರನಲ್ಲೇ ಉಳಿದುಬಿಡುತ್ತಾರೆ. ಅಲ್ಲೇ ತನ್ನದೊಂದು ಪಾರಂಪರಿಕ ಔಷಧಿಯ ಅಂಗಡಿ ಮತ್ತು ಮನೆಯನ್ನು ಮಾಡಿಕೊಂಡು ನೆಲೆಗೊಳ್ಳುತ್ತಾರೆ. ಇದೇ ವೃತ್ತಿಯನ್ನು ಮುಂದುವರೆಸುವ ಹಕೀಮ್ ಸಾಬ್ ತನ್ನ ಆಥರ್ಿಕ ಸ್ಥಿತಿ ಸುಧಾರಿಸಬೇಕಾದರೆ ತನಗೊಂದು ಗಂಡು ಮಗುಬೇಕು ಎಂದು ಪದೇ ಪದೇ ಪ್ರಯತ್ನ ಪಡುತ್ತಲೇ ಇರುತ್ತಾನೆ. ಆದರೆ ಪ್ರತಿ ಸಾರಿಯೂ ಹೆಣ್ಣು ಶಿಶುಗಳ ಜನನ. ಕೊನೆಗೆ ಎಂಟನೆ ಮಗು ಗಂಡು ಸಂತಾನವಾದಾಗ ಅವನ ಸಂತೋಷಕ್ಕೆ ಪಾರವೇ ಇಲ್ಲ.

ಆದರೆ ಕೆಲವೇ ಕ್ಷಣಗಳಲ್ಲಿ ಅದು ಗಂಡೂ ಅಲ್ಲದ ಹೆಣ್ಣೂ ಅಲ್ಲದ ಮೂರನೇ ಲಿಂಗ (ಹಿಜರಾ) ಎಂದು ತಿಳಿದಾಗ ಆಘಾತಕೊಳಗಾಗುತ್ತಾನೆ. ಅಷ್ಟೇ ಅಲ್ಲ ಸಮಾಜವನ್ನು ಎದುರಿಸುವುದು ಕಷ್ಟ ಎಂದು ಆ ಹಸುಳೆಯನ್ನು ಕೊಲ್ಲವುದಕ್ಕೂ ಮುಂದಾಗುತ್ತಾನೆ. ಆಗ ಆತನ ಹೆಂಡತಿ ಸುರಯ್ಯಾ (ಝಾಯಿಬ್ ರೆಹಮನ್) ಅವನನ್ನು ತಡೆಯುತ್ತಾಳೆ. ಪರಿಪರಿಯಾಗಿ ಬೇಡಿಕೊಂಡ ನಂತರ ಕೊನೆಗೂ ಅವನನ್ನು ನಲ್ಕು ಗೋಡೆಗಳ ಮಧ್ಯೆ ಕೂಡಿಹಾಕುವ ಷರತ್ತಿನೊಂದಿಗೆ ಒಪ್ಪಿಕೊಳ್ಳುತ್ತಾನೆ. ಆ ಮಗು ಸೈಫಿ (ಮೆಹರ್ ಸಾಗರ್/ಉಮರ್ ಕಶ್ಮೀರಿ) ಹೊರ ಪ್ರಪಂಚದ ಜ್ಞಾನವೇ ಇಲ್ಲದೇ ಮತ್ತು ತನ್ನನ್ನು ಕಂಡರೆ ಅಸಹ್ಯ ಪಟ್ಟುಕೊಳ್ಳುವ ತಂದೆ ಎಂದರೆ ಅಂಜಿಕೆಯೊಂದಿಗೇ ಬೆಳೆಯುತ್ತದೆ. ಅದಕ್ಕೆ ತನ್ನ ಕೋಣೆಯೇ ಪ್ರಪಂಚ, ಅಲ್ಲಿ ಬಿಡಿಸಲಾಗಿರುವ ಚಿತ್ರಗಳೇ ಅವನ ಒಡನಾಡಿಗಳು. ಅಪ್ಪನನ್ನು ಬಿಟ್ಟು ಕುಂಟುಂಬದ ಎಲ್ಲರೂ ಅವನನ್ನು ಪ್ರೀತಿಯಿಂದ ಕಾಣುತ್ತಾರೆ.
ಈ ಮಧ್ಯೆ ಜೈನಾಬ್ ಮದುವೆಯಾಗಿ ಗಂಡನ ಮನೆಗೆ ಹೋಗುತ್ತಾಳೆ. ಆದರೆ ಪತಿಯ ಕಿರುಕುಳ ತಾಳಲಾರದೆ ಕೆಲವೇ ತಿಂಗಳಲ್ಲಿ ಮತ್ತೆ ತಂದೆಯ ಮನೆ ಸೇರಬೇಕಾಗುತ್ತದೆ. ಆಕೆಯ ಬೆಳೆದು ನಿಂತಿರುವ ತಮ್ಮನಲ್ಲಿ ಹೆಣ್ಣಿನ ಲಕ್ಷಣಗಳು ಕಾಣಿಸಿಕೊಳ್ಳುವುದು, ಅವನು ಹೆಣ್ಣಿನಂತೆ ಬಟ್ಟೆ ತೊಡುವುದನ್ನು ನೋಡುವ ಜೈನಾಬ್ ಅವನ ಮೇಲೆ ರೇಗುತ್ತಾಳೆ. ಆಗ ಆಕೆಯ ಸಮಸ್ಯೆಗೆ ಮುಸ್ತಫಾ (ಆತಿಫ್ ಅಸ್ಲಂ) ಪರಿಹಾರ ಸೂಚಿಸುತ್ತಾನೆ. ಮುಂಚಿನಿಂದಲೂ ಜೈನಾಬ್ಳ ತಂಗಿ ಆಯೆಶಾ(ಮಹಿರಾ ಖಾನ್)ಳನ್ನು ಪ್ರೀತಿಸುವ ಮುಸ್ತಫಾ, ಸೈಫಿಗೆ ಟ್ರಕ್ಗಳಿಗೆ ಪೈಂಟ್ ಮಾಡುವ ಕೆಲಸಕೊಡಿಸುತ್ತಾನೆ. ಆದರೆ ಸೈಫಿಯ ಲಿಂಗದ ಬಗ್ಗೆ ತಿಳಿದ ಅಲ್ಲಿನ ಅವನ ಸಹೋದ್ಯೋಗಿಗಳಿಂದ ಅವನಿಗೆ ಕಿರುಕುಳ ಶುರುವಾಗುತ್ತದೆ. ಒಂದು ದಿನ ಅವರೆಲ್ಲಾ ಸೇರಿ ಸೈಫಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗುತ್ತಾರೆ. ಇದನ್ನು ಸೈಫಿ ತನ್ನ ತಾಯಿ ಮತ್ತು ಅಕ್ಕನಿಗೆ ಹೇಳುವುದನ್ನು ಕೇಳಿಸಿಕೊಳ್ಳುವ ಅವನ ತಂದೆ ಎಲ್ಲರೂ ಮಲಗಿದ್ದ ವೇಳೆ ಅವನನ್ನು ಉಸಿರುಗಟ್ಟಿಸಿ ಕೊಂದುಬಿಡುತ್ತಾನೆ. ಈ ಕೊಲೆಯಿಂದ ಹೊರಬರಲು ಪೋಲಿಸರು ಎರಡು ಲಕ್ಷ ಲಂಚ ಕೇಳಿದಾಗ ಆ ಹಣವನ್ನು ಹೊಂದಿಸಲು ಅವನು ತನ್ನ ಮೇಲೇ ನಂಬಿಕೆ ಇಟ್ಟು ಕೊಟ್ಟಿದ್ದ ಮಸೀದಿಯ ಹಣವನ್ನು ಬಳಸಿಕೊಳ್ಳುತ್ತಾನೆ. ಜೊತೆಗೆ ತನ್ನ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಲು ವೇಶ್ಯಾವಾಟಿಕೆ ನಡೆಸುವವನ ಮಕ್ಕಳಿಗೆ ಖುರಾನ್ ಹೇಳಿಕೊಡುವ ಕೆಲಸಕ್ಕೆ ಒಪ್ಪಿಕೊಳ್ಳುತ್ತಾನೆ. ಈ ಮಧ್ಯೆ ಮಸೀದಿಯ ಹಣ ವಾಪಸು ಮಾಡುವ ಸಂದರ್ಭ ಎದುರಾದಾಗ ಆ ತಲೆಹಿಡುಕನನ್ನೇ ಅವನು ಸಾಲ ಕೇಳುವ ಪ್ರಸಂಗ ಎದುರಾಗುತ್ತದೆ. ಆದರೆ ಹೆಣ್ಣುಗಳಿಂದಲೇ ತನ್ನ ಜೀವನವನ್ನು ನಡೆಸುವ ಆವನು ತನ್ನ ದಂಧೆ ಸರಾಗವಾಗಿ ಇನ್ನು ಮುಂದು ಸಾಗಬೇಕಾದರೆ ಈಗಿರುವ ವೇಶ್ಯೆಗೆ ಒಂದು ಹೆಣ್ಣು ಮಗುವಾಗಬೇಕು, ಇದಕ್ಕೆ ನೀನು ಒಪ್ಪುವುದಾದರೆ ಆ ಹಣವನ್ನು ನಿನಗೆ ಕೊಡುತ್ತೇನೆ ಎಂದು ಷರತ್ತು ವಿಧಿಸುತ್ತಾನೆ. ಹೀಗೆ ವೇಶ್ಯೆಯ ಸಂಗ ಮಾಡಿ ಅನೈತಿಕ ಸಂಬಂಧ ಬೆಳೆಸಿಕೊಳ್ಳುವ ಹಕೀಂ ಸಾಬ್ನಿಂದ ಕೊನೆಗೂ ಅವಳಿಗೆ ಒಂದು ಹಣ್ಣು ಶಿಶುವಾಗುತ್ತದೆ.
ಆದರೆ ಆ ಮಗುವನ್ನು ಅಲ್ಲಿ ಬಿಟ್ಟು ಹೋಗಲು ಮನಸೊಪ್ಪದೆ ಅದನ್ನು ತನ್ನೊಡನೆ ಕಳಸಿಕೊಡು ಎಂದು ಆ ವೇಶ್ಯೆಯಲ್ಲಿ ಕೇಳಿಕೊಳ್ಳುವುದನ್ನು ತಿಳಿದು ಆ ಮಾಲೀಕ ಅವನನ್ನು ಅಲ್ಲಿಂದ ಹೊಡೆದಟ್ಟುತ್ತಾನೆ. ಕೊನೆಗೆ ಒಂದು ದಿನ ಆಕೆಯ ತನ್ನ ಮಗುವನ್ನು ಹಕೀಂ ಸಾಬ್ನ ಮನೆಗೆ ತಂದುಬಿಡುತ್ತಾಳೆ. ಆಗ ತನ್ನ ಗಂಡ/ತಂದೆಯ ಅನೈತಿಕ ಸಂಬಂಧದ ಬಗ್ಗೆ ತಿಳಿದುಕೊಳ್ಳುವ ಹೆಂಡತಿ ಮತ್ತು ಮಕ್ಕಳು ಅವನೊಡನೆ ವಾದ ಮಾಡಿಕೊಂಡು ಮಾರನೆ ದಿನ ಮನೆ ಬಿಟ್ಟು ಹೊರ ಹೋಗುವ ನಿಧರ್ಾರಕ್ಕೆ ಬರುತ್ತಾರೆ. ಆದರೆ ವೇಶ್ಯಾವಾಟಿಕೆ ನಡೆಸುವ ಮಾಲೀಕ ಇದ್ದಕ್ಕಿದಂತೆ ಅವರ ಮನೆ ಮೇಲೆ ದಾಳಿ ಮಾಡಿದಾಗ ಹಕೀಂ ಸಾಬ್ ಆ ಹಸುಳೆಯನ್ನೂ ಕೊಲ್ಲಲು ಹೋಗುತ್ತಾನೆ. ಇದನ್ನು ವಿರೋಧಿಸುವ ಜೈನಾಬ್ ಕೊನೆಗೆ ಬೇರೆ ದಾರಿ ಕಾಣದೆ ತನ್ನ ತಂದೆಯನ್ನು ಕೊಂದು ಆ ಮಗುವನ್ನು ತನ್ನ ತಂಗಿಯೊಡನೆ ಬೇರೆ ಕಡೆ ಕಳಿಸಿ ರಕ್ಷಿಸುತ್ತಾಳೆ. ಮನೆಯಲ್ಲಾ ಹುಡುಕಾಡಿದರೂ ಎಲ್ಲೂ ಮಗು ಕಾಣದಿದ್ದಾಗ ಖಾಲಿ ಕೈಲಿ ಆ ಮಾಲೀಕ ವಾಪಾಸಾಗುತ್ತಾನೆ. ಆದರೆ ತನ್ನ ತಂದೆಯನ್ನು ಕೊಂದ ಅಪರಾಧಕ್ಕೆ ಜೈನಾಬ್ಗೆ ಮರಣದಂಡನೆ ವಿಧಿಸಲಾಗುತ್ತದೆ.
ಇಲ್ಲಿ ನಿರ್ದೇಶಕ ಸೋಯೆಬ್ ಮನ್ಸೂರ್ ಹೆಣ್ಣು ಅನುಭವಿಸುವ ಸಮಸ್ಯೆಗಳ ಬಗ್ಗೆ ಹೇಳ ಹೊರಟಿರುವುದು ಗೊತ್ತಾದರೂ, ನಿರೂಪಣೆಯಲ್ಲಿ ಬಹಳಷ್ಟು ಗೊಂದಲಗಳಿವೆ. ಒಂದು ಸಮಸ್ಯೆಯನ್ನು ಹೇಳಲು ಹೋಗಿ ಇನ್ನೊಂದು ಸಮಸ್ಯೆಯನ್ನು ಅದರ ಮಧಯೆ ಇರುಕಿಸುತ್ತಾ ಹೋಗುತ್ತಾರೆ. ನಿರೂಪಣೆಯಲ್ಲಿ ಇನ್ನಷ್ಟು ಗಟ್ಟಿತನವಿದ್ದರೆ ಚಿತ್ರ ಇನ್ನೂ ಚೆನ್ನಾಗಿ ಮೂಡಿಬರುತ್ತಿತ್ತು ಎನಿಸುತ್ತದೆ.
ಚಿತ್ರದ ಕೊನೆಯಲ್ಲಿ ನಾಯಕಿ ಎಲ್ಲರಿಗೂ ಒಂದು ಪ್ರಶ್ನೆಯನ್ನು ಹಾಕುತ್ತಾಳೆ ಕೇವಲ ಸಾಯಿಸುವವರಿಗಷ್ಟೇ ಏಕೆ ಶಿಕ್ಷೆ ವಿಧಿಸಲಾಗುತ್ತದೆ. ಹುಟ್ಟಿಸುವವರಿಗೆ ಏಕಿಲ್ಲ ಅಂತ. ನಿಜಕ್ಕೂ ಮಕ್ಕಳನ್ನು ಹುಟ್ಟಿಸಿ ಅವರನ್ನು ಸಾಕಲಾಗದೇ ಅಥವಾ ಇನ್ನಾವುದೋ ಕಾರಣಕ್ಕೆ ಅವರಿಗೆ ನಿತ್ಯವೂ ನರಕದ ದರ್ಶನ ಮಾಡಿಸುವ ಕೆಲವು ಪೋಷಕರೂ ನಮ್ಮೊಡಿನಿದ್ದಾರೆ. ಅಂಥವರಿಗೂ ಶಿಕ್ಷೆ ಆಗಬೇಕು. ಒಂದು ಆಶಯವನ್ನಿಟ್ಟುಕೊಂಡು ಮಾಡಿದ ಈ ಸಿನಿಮಾ ನಿಜಕ್ಕೂ ಕೆಲವು ಲೋಪದೋಷಗಳನ್ನು ಹೊರತು ಪಡಿಸಿದರೆ ನಿಮ್ಮನ್ನು ಸರಾಗವಾಗಿ ನೋಡಿಸಿಕೊಂಡು ಹೋಗುತ್ತದೆ.

Thursday, December 5, 2013

ಜೀವನ ಒಂಟಿ ರೈಲು ನಿಲ್ದಾಣ

ಅವಧಿಯಲ್ಲಿ ಪ್ರಕಟಗೊಂಡ ನನ್ನ ಎರಡನೇ ಲೇಖನ... ನಿಮಗಾಗಿ


ಯಾಕೋ ರೈಲು ನಿಲ್ದಾಣ ನೋಡಿದಾಗ…

ಜೀವನ ಒಂಟಿ ರೈಲು ನಿಲ್ದಾಣ

ನವೀನ್ ಕುಮಾರ್ ಕೆ

ಮೊನ್ನೆ ಶನಿವಾರ ನನಗೆ ಪರೀಕ್ಷೆ ಇತ್ತು, ಬಳ್ಳಾರಿಯಲ್ಲಿ. ಸರಿ ಪರೀಕ್ಷೆ ಅಂದ ಮೇಲೆ ತಪ್ಪಿಸೋಕಾಗುತ್ತಾ? ಶುಕ್ರವಾರದಂದು ರಾತ್ರಿಯೇ ಬೆಂಗಳೂರಿನಿಂದ ಹೊರಟೆ. ರಾತ್ರಿ ಪೂರಾ ಬಸ್ಸಿನಲ್ಲಿ ನಿದ್ದೆ ಇಲ್ಲ. ಬೆಳಗಾದರೆ 9 ಗಂಟೆಗೆ ಪರೀಕ್ಷೆ ಬೇರೆ. ಹಾಗೂ ಹೀಗೂ ಬಸ್ಸು ಬಳ್ಳಾರಿ ತಲುಪಿದಾಗ ಬೆಳಗಿನ ಜಾವ 4.50ರ ಸಮಯ. ಬಸ್ಸಿಳಿದೊಡನೆ ನನ್ನನ್ನು ಪಿಕ್ ಮಾಡಲು ಬರುತ್ತೇನೆಂದು ಒಪ್ಪಿಕೊಂಡಿದ್ದ ಗೆಳೆಯನಿಗೆ ಫೋನ್ ಮಾಡಿದರೆ, ಮಹಾಶಯನಿಂದ ಉತ್ತರವೇ ಇಲ್ಲ. ಗಡದ್ದಾಗಿ ನಿದ್ದೆ ಮಾಡುತ್ತಿದ್ದನೆನಿಸುತ್ತೆ. ಐದಾರು ಬಾರಿ ಕರೆ ಮಾಡಿ ಕೊನೆಗೆ ಬೇಸತ್ತು ನಡೆದುಕೊಂಡೇ ಹೊರಟೆ.
ಸುಮಾರು ಹನ್ನೊಂದು ವರ್ಷಗಳ ಕಾಲ ಬಳ್ಳಾರಿಯಲ್ಲೇ ಇದ್ದರೂ ಬೆಳಗಿನ ಸಮಯದಲ್ಲಿ ಅದೂ 5 ಗಂಟೆಗೇ, ನಾನು ಹೊರಗೆ ಬಂದಿದ್ದು ತೀರಾ ವಿರಳ. ಇನ್ನೂ ಮಬ್ಬುಗತ್ತಲು ಹಾಗೆಯೇ ಇತ್ತು. ಆ ಕತ್ತಲಲ್ಲಿಯೇ ನಾನು ನಡೆದು ಸಾಗಿದಂತೆಲ್ಲಾ ಕಪ್ಪು ಟಾರಿನ ರಸ್ತೆಯನ್ನು ಹಿಮ್ಮೆಟ್ಟಿ ಸಾಗುತ್ತಿರುವ ಅನುಭವ ನನಗೆ ನಡೆದು ಹೋಗಲು ಸ್ಪೂರ್ತಿಯಾಗಿತ್ತು. ಹಾಗೇ ಮುಂದೆ ಬಳ್ಳಾರಿಯ ಗುಡ್ಡದ ಪಕ್ಕದಿಂದಲೇ ಹಾದು ಹೋಗುವ ರಸ್ತೆಯಲ್ಲಿ ಗಡ್ಡದ ಕಲ್ಲು ಬಂಡೆಗಳೂ, ಕರಿಯ ಹೊದಿಕೆ ಹೊದ್ದ ಆಕಾಶವೂ ಮಿಲನಗೊಂಡ ಭ್ರಾಂತಿ. ಈ ಮಿಲನವನ್ನು ತಡೆಯಲೇನೋ ಎಂಬಂತೆ, ಸೂರ್ಯ ಎಲ್ಲಿಂದ ಹೊರಬರಬೇಕೆಂದು ತವಕಿಸುತ್ತಾ ಇಣುಕಿ ನೋಡುತ್ತಿದ್ದಾನೇನೋ ಎಂದು ಭಾಸವಾಗುತ್ತಿತ್ತು. ರಾತ್ರಿಯೆಂದರೆ ಕರಾಳವಾಗೇ ಊಹಿಸಿಕೊಳ್ಳುತ್ತಿದ್ದ ನನಗೆ ಕತ್ತಲು ಕೂಡ ಇಷ್ಟು ರಮ್ಯವಾಗಿರುವುದು ಎಂದು ತಿಳಿದದ್ದೇ ಅಂದು. ಹಾಗೆಯೇ ಪ್ರಕೃತಿಯ ಸವಿ ಮತ್ತು ಮುಂಜಾವಿನ ತಣ್ಣನೆಯ ಗಾಳಿಯನ್ನು ಸವಿಯುತ್ತಾ ಭ್ರಮಾ ಲೋಕದಲ್ಲಿರುವಂತೆ ಮುಂದೆ ಸಾಗಿದವನಿಗೆ ಎಚ್ಚರವಾದದ್ದು ಸ್ನೇಹಿತನ ರೂಮು ಸಮೀಪಿಸಿದಾಗ.
ಹೋಗಿ ಬಾಗಿಲು ತಟ್ಟುತ್ತಿದ್ದಂತೆ ಗೆಳೆಯ ಬಾಗಿಲು ತೆರೆದವನೇ ಹೇಗಿದ್ದೀಯ ಬಾ ಒಳಗೆ… ಎಂದು ಸ್ವಲ್ಪ ರೆಸ್ಟ್ ತಗೋ ಅಂತ ಚಾಪೆ ತೋರಿಸಿದ. ಅಲ್ಲಿಯವರೆಗೂ ಎಲ್ಲಿತ್ತೋ ಗೊತ್ತಿಲ್ಲ, ನಲವತ್ತು ನಿಮಿಷದ ನಡಿಗೆಯ ಆಯಾಸ ಧುತ್ತೆಂದು ಹೊರಬಿತ್ತು, ಕಣ್ಣುಗಳು ಎಳೆಯ ತೊಡಗಿದವು. ಸರಿ ಸ್ವಲ್ಪ ಹೊತ್ತು ಮಲಗಿ ನಂತರ ಎದ್ದು ಫ್ರೆಷಪ್ ಆಗಿ ಪರೀಕ್ಷೆಗೂ ಒಂದಷ್ಟು ತಯಾರಿ ಮಾಡಿಕೊಂಡರಾಯ್ತು ಎಂದುಕೊಂಡು ಮಲಗಿದವನಿಗೆ ಎಚ್ಚರವಾಗಿದ್ದೆ ಎಂಟರ ಹೊತ್ತಿಗೆ. ಹರಿಬರಿಯಲ್ಲಿ ಎದ್ದವನೇ ಸ್ನಾನಾದಿಗಳನ್ನು ಮುಗಿಸಿ ನೇರ ಕಾಲೇಜ್ ಹತ್ತಿರವಿರುವ ಕ್ಯಾಂಟೀನ್ಗೆ ಹೋದವನೇ ಒಂದಷ್ಟು ಮಂಡಕ್ಕಿ ವಗ್ಗರಣೆ, ಮಿರ್ಚಿಯನ್ನು ಹೊಟ್ಟೆಯ ಚೀಲಕ್ಕೆ ತುಂಬಿಸಿಕೊಂಡು ಎಕ್ಸಾಮ್ ಹಾಲ್ಗೆ ಹೋದವನಿಗೆ ಪ್ರಶ್ನೆ ಪತ್ರಿಕೆ ನೋಡಿ ಅರ್ಧ ಜಂಘಾಬಲವೇ ಉಡುಗಿಹೋದಂತಾಗಿತ್ತು. ಮೊದಲೇ ಏನೂ ಓದಿರಲಿಲ್ಲ. ಇನ್ನು ಅದರಲ್ಲಿರುವ ಕೆಲವು ಪದಗಳು ಇದೇ ಮೊದಲಬಾರಿಗೆ ಓದಿದಂತೆ ಅನಿಸುತಿತ್ತು. ಆದರೂ ಹೇಗೋ ಒಂದಷ್ಟು ನೆನಪಿರುವುದನ್ನೆಲ್ಲಾ ಕಲೇಬಿದ್ದು ಮನಃ ಪಟಲದಲ್ಲಿ ಕೂಡಿಹಾಕಿಕೊಂಡು, ಅದನ್ನೇ ಉತ್ತರ ಪತ್ರಿಕೆಯಲ್ಲಿ ಬರೆದು, ಸಮಯ ಮುಗಿಯುತ್ತಿದ್ದಂತೆ ಬದುಕಿದೆಯಾ ಬಡಜೀವವೇ ಎಂದು ಹೊರಬಿದ್ದೆ.
ಮತ್ತೆ ಹೊಸಪೇಟೆಗೆ ಹೋಗಬೇಕಿದ್ದುದರಿಂದ ಸ್ನೇಹಿತನ ಮನೆಗೆ ಹೋಗಿ ಮಧ್ಯಾಹ್ನದ ಊಟ ಮುಗಿಸಿಕೊಂಡು ರೈಲ್ವೇ ಸ್ಟೇಷನ್ ಕಡೆ ಹೊರಟೆ. ನಿದ್ದೆಯ ಮಂಪರು ಇನ್ನೂ ಬಿಟ್ಟಿರಲಿಲ್ಲ. ತಲೆಯ ಮೇಲೆ ಮಟ ಮಟ ಮಧ್ಯಾಹ್ನದ ಬೆಂಕಿ ಚಂಡು ನೆತ್ತಿಯನ್ನು ಸುಡುತ್ತಿತ್ತು. ಸ್ಟೇಷನ್ ತಲುಪಿ ಟಿಕೇಟ್ ತೆಗೆಸಿಕೊಳ್ಳಲು ಹೋದರೆ ಅಲ್ಲೂ ರೈಲು ಬೋಗಿಗಳಷ್ಟು ಉದ್ದದ ಕ್ಯೂ. ಹದಿನೈದು ನಿಮಿಷಗಳ ಬೇಸರದ ಕಾಯುವಿಕೆಯ ನಂತರ ಟಿಕೇಟ್ ಪಡೆದು ಒಳ ಹೊಕ್ಕವನಿಗೆ, ಹಳೆಯ ಸಹ-ಕೆಲಸಗಾರನೊಬ್ಬ ಭೇಟಿಯಾದ. ಅವನು ತನ್ನ ಹೆಂಡತಿಯೊಂದಿಗೆ ಹುಬ್ಬಳ್ಳಿಗೆ ಹೊರಟಿದ್ದನಂತೆ. ಇತ್ತೀಚಿಗಷ್ಟೇ ಮದುವೆಯಾಗಿದ್ದ ಅವನ ಮುಖದಲ್ಲಿ ಇನ್ನೂ ಮದುಮಗನ ಕಳೆ ಎದ್ದು ಕಾಣುತಿತ್ತು. ಅವನ ಕುಶಲೋಪರಿ ವಿಚಾರಿಸಿ ಅವನ ನವಜೀವನಕ್ಕೆ ಶುಭ ಹಾರೈಸಿ ಮುಂದಕ್ಕೆ ಹೋದೆ. ಶನಿವಾರವಾದ ಕಾರಣ ನಿಲ್ದಾಣದ ತುಂಬಾ ಜನಜಂಗುಳಿ ಗಿಜಿಗುಡುತ್ತಿತ್ತು. ಚಿಕ್ಕ ಮಕ್ಕಳ ಅಳು, ಸತ್ತಲೂ ಇರುವವರ ಪರಿವೆಯೇ ಇಲ್ಲದಂತೆ ಜೋರಾಗಿ ಅವರಿವರ ಬಗ್ಗೆ ಮಾತನಾಡಿಕೊಳ್ಳುತ್ತಿರುವವರು, ಕೀಟಲೆ ಮಾಡುತ್ತಿರುವ ಮಕ್ಕಳನ್ನು ಗಡರಿಸುವವರು ಹೀಗೆ ನಾನಾ ರೀತಿಯ ಜನ ಅವರವರ ಲೋಕದಲ್ಲಿ ಮುಳುಗಿದ್ದರು.
ಆಗಲೇ ರೈಲು ಅರ್ಧಗಂಟೆ ತಡವಾಗಿ ಚಲಿಸುತ್ತಿದೆ ಎಂಬ ಉದ್ಘೋಷಕರ ಧ್ವನಿ ಕೇಳಿ ಎಲ್ಲರೂ ಈ ಲೋಕಕ್ಕೆ ಮರಳಿದವರಂತೆ, ಈ ರೈಲುಗಳ ಹಣೇಬರಹವೇ ಇಷ್ಟು. ಯಾವತ್ತಾದರೂ ಸಮಯಕ್ಕೆ ಸರಿಯಾಗಿ ಬಂದರೆ ಅದೇ ದೊಡ್ಡ ಸಾಹಸ ಎಂದು ಬೈದುಕೊಳ್ಳಲು ಶುರುವಿಟ್ಟರು. ಸರಿ ಇನ್ನೂ ಅರ್ಧಗಂಟೆ ಹೇಗೆ ಕಾಲ ಕಳೆಯುವುದು ಎಂದು ನನ್ನ ಬ್ಯಾಗ್ ತಡಕುತ್ತಿದ್ದವನಿಗೆ ಯಾವುದೋ ಮಾಸ ಪತ್ರಿಕೆಯೊಂದು ಸಿಕ್ಕಿತು. ಅದನ್ನೇ ಓದುತ್ತಾ ಕುಳಿತೆ. ಓದುತ್ತಿದ್ದವನಿಗೆ ಅದ್ಯಾವಾಗ ಅರ್ಧಗಂಟೆಯಾಯ್ತೋ ಗೊತ್ತಾಗಲಿಲ್ಲ. ಮತ್ತೆ ಇನ್ನು ಕೆಲವೇ ಕ್ಷಣಗಳಲ್ಲಿ ರೈಲು ನಿಲ್ದಾಣಕ್ಕೆ ಬರಲಿದೆ ಎಂಬ ಅನೌನ್ಸ್ಮೆಂಟ್ ಬಂದಾಗಲೇ ಎಚ್ಚರವಾಗಿದ್ದು. ಆಗ ಸುತ್ತಲೂ ನೋಡಿದೆ. ಎಲ್ಲರೂ ರೈಲಿನ ಬರುವಿಗಾಗಿ ಕಾಯುತ್ತಾ ಶತಪಥ ಹಾಕುತ್ತಿದ್ದರು. ಇನ್ನು ಕೆಲವರು ಸೀಟನ್ನು ಹಿಡಿಯಲು ಪ್ಲಾಟ್ಫರ್ಾಮ್ ಬಿಟ್ಟು ಆಚೆ ಬದಿಯಲ್ಲಿ ಹೋಗತೊಡಗಿದರು. ಆಗ ಗಮನ ಸೆಳೆದದ್ದು ಒಂದು ಪುಟ್ಟ ಹುಡುಗಿಯ ಧ್ವನಿ. ಅವಳು ಮಾಮಾ ಎಂದು ಕರೆಯುತ್ತಿದ್ದರೆ, ಯಾರಪ್ಪಾ ಅದು ಎಂದು ನೋಡಿದೆ. ಚಿಕ್ಕ ಮಗುವೊಂದು ಆಚೆ ಬದಿ ಹೋಗುತ್ತಿದ್ದ ತನ್ನ ಸೋದರಮಾವನನ್ನು ಕೂಗುತ್ತಿತ್ತು.
ಸುಮ್ಮನೆ ಆಟವಾಡಿಸಲು ಕೂಗುತ್ತಿದೆಯೇನೋ ಅನಿಸಿದರೂ, ಯಾಕೋ ಕುತೂಹಲ ಮೂಡಿ ಆ ಮಗುವನ್ನೇ ದಿಟ್ಟಿಸುತ್ತಿದ್ದೆ. ಮೂರ್ನಾಲ್ಕು ಸಲ ಕೂಗಿದ ನಂತರ ಆ ಹುಡುಗಿಯ ಮಾವ ಅವಳೆಡೆಗೆ ತಿರುಗಿದಾಗ, ಹಷಾರು ಮಾಮ, ತುಂಬಾ ಹತ್ತಿರ ಹೋಗಬೇಡ ಎಂದು ಎಚ್ಚರಿಕೆಯನ್ನು ನೀಡಿತು. ಆ ಎಳೆ ಹುಡುಗಿಗೆ ತನ್ನ ಮನೆಯವರ ಮೇಲೆ ಇರುವ ಪ್ರೇಮ, ಕಾಳಜಿ ನಿಜಕ್ಕೂ ನನ್ನನ್ನು ಮೂಕವಿಸ್ಮಿತನನ್ನಾಗಿಸಿತ್ತು. ಅಷ್ಟರಲ್ಲೇ ನಾವು ಹೊರಡಬೇಕಿರುವ ರೈಲು ನಿಲ್ದಾಣಕ್ಕೆ ಬಂದು ನಿಂತಿದ್ದರಿಂದ, ನಾನೂ ಸೀಟು ಹಿಡಿದುಕೊಳ್ಳಲು ತರಾತುರಿಯಲಿ ಒಳ ಹೊಕ್ಕು, ಅಂತೂ ಒಂದು ಕಿಟಕಿ ಬದಿಯ ಕುರ್ಚಿಯಲ್ಲಿ ಕುಳಿತುಕೊಂಡೆ. ಹಾಗೇ ಕಿಟಕಿಗೆ ತಲೆಯಾನಿಸಿ ಹೊರ ನೋಡುತ್ತಿದ್ದವನಿಗೆ ಅಷ್ಟೊತ್ತು ಇದ್ದ ಜನರ ಕಲರವ, ಆ ಗಡಿಬಿಡಿ ಕಡಿಮೆಯಾಗುತ್ತಿರುವುದು ಕಾಣಿಸಿತು. ಹಾಗೇ ರೈಲು ಹೊರಡುವಷ್ಟರಲ್ಲಿ ರೈಲು ನಿಲ್ದಾಣ ಪೂರ್ತಿ ಖಾಲಿಯಾಗಿತ್ತು. ಬರಿ ಸಾಮಾನುಗಳನ್ನು ಸಾಗಿಸುವ ರೈಲ್ವೇ ಸಿಬ್ಬಂದಿಯನ್ನು ಬಿಟ್ಟು ಬೇರೆ ಯಾರೂ ಅಲ್ಲಿ ಕಾಣಲಿಲ್ಲ. ಆಗಲೇ ಅನಿಸಿದ್ದು, ನಮ್ಮ ಜೀವನವೂ ಇಷ್ಟೇ, ರೈಲು ನಿಲ್ದಾಣದಂತೆ. ಅನೇಕರ ಆಗಮವಾದರೂ, ಅವರವರ ರೈಲುಗಳು ಬಂದಾಗ, ಕೆಲವರು ಹೇಳಿ ಹೊರಟರೆ ಇನ್ನು ಕೆಲವರು ಹೇಳದೆಯೇ ಹೊರಟುಹೋಗುತ್ತಾರೆ. ಕೊನಗೆ ನಮ್ಮ ಜೀವನ ಒಂಟಿ ರೈಲು ನಿಲ್ದಾಣದಂತೆ ಖಾಲಿ ಖಾಲಿ.
ಬರುವಾಗಲೂ ಒಬ್ಬಂಟಿ
ಹೋಗುವಾಗಲೂ ಒಬ್ಬಂಟಿ
ನಡುವೆ ಬಾಂಧವ್ಯಗಳ, ಭಾವನೆಗಳ ಸರಮಾಲೆಹೊತ್ತು
ತಿರುಗುವ ಆತುರದಲ್ಲಿ
ಪ್ರಕೃತಿ ಸತ್ಯವನ್ನೇ ಮರೆತು ವೇಗದಿಂದ ಮುನ್ನುಗ್ಗುತ್ತೇವೆ,
ಇದ್ದಕ್ಕಿದ್ದಂತೆ ಒಂಟಿ ಎಂಬ ಸತ್ಯ
ಎದುರು ಗೋಚರಿಸಿದಾಗ ಮತ್ತೆ ಕುಗ್ಗಿ ಬಾಗುತ್ತೇವೆ.
ಹೀಗೆ ಯೋಚಿಸುತ್ತಾ ಕಿಟಕಿಗೆ ಆನಿಕೊಂಡು ಕುಳಿತವನಿಗೆ ನಿದ್ದೆ ಯಾವಾಗ ಹತ್ತಿತು ಎಂಬುದು ಗೊತ್ತಾಗಲಿಲ್ಲ. ಆದರೆ ಎಚ್ಚರಗೊಂಡ ಮೇಲೂ ಅದೇ ಸಾಲುಗಳು ನನ್ನನ್ನು ಇನ್ನೂ ಕಾಡುತ್ತಿವೆ.

Sunday, November 24, 2013

ಅವಧಿಯಲ್ಲಿ ನನ್ನ ಮತ್ತು ಸ್ನೇಹಿತೆ ಮಂಜುಳಳ ಢುಂಢಿ ಕುರಿತ ಅಭಿಪ್ರಾಯ 5sep-13 ರಂದು ಪ್ರಕಟಗೊಂಡಿತ್ತು...

‘ಢುಂಢಿ’ ವಿವಾದ: ಇಬ್ಬರು ವಿದ್ಯಾರ್ಥಿಗಳು ಕಂಡಂತೆ

September 5, 2013
by G
ಢುಂಢಿ ವಿವಾದಾತ್ಮಕ ಕೃತಿಯಾಗಬೇಕಿರಲಿಲ್ಲ
ಮಂಜುಳ ಹುಲಿಕುಂಟೆ
ಬದುಕು ಕಮ್ಯುನಿಟಿ ಕಾಲೇಜ್
ಯೋಗೇಶ್ ಮಾಸ್ಟರ್ ರವರ ‘ಢುಂಢಿ’ ಕೃತಿಯು ಒಂದು ವೈಚಾರಿಕ ಕೃತಿಯಾಗಿದ್ದು ಮಿಶ್ರ ಪ್ರತಿಕ್ರಿಯೆಗಳಿಗೆ ಆಸ್ಪದ ಮಾಡಿಕೊಟ್ಟಿರುವುದು ಪ್ರಜ್ಞಾವಂತರು ಗಮನಿಸಬೇಕಾದ ಅಂಶವಾಗಿದೆ. ಪ್ರಾಚೀನ ಹಿಂದೂ ಧರ್ಮ ಗ್ರಂಥಗಳಲ್ಲಿ ದೇವರಾಗಿ ಪ್ರಥಮ ಪೂಜೆ ಪಡೆಯುತ್ತಿರುವ ಗಣಪತಿಯ ಹುಟ್ಟಿನ ಬಗ್ಗೆ ಅನೇಕರಿಗೆ ಇರುವ ಅನುಮಾನ ಇಂದು ನೆನ್ನೆಯದಲ್ಲ. ಗಣಪತಿ ಎಂದರೆ ಒಂದು ಗುಂಪಿನ ನಾಯಕ ಆತ ಒಬ್ಬ ಕಾಡುಮಾನವ(ಡ್ರಾವಿಡ ವ್ಯಕ್ತಿ) ಆತನಿಂದ ದೇವಾನುದೇವತೆಯರ ಕೆಲವು ಕೆಲಸಗಳಿಗೆ ವಿಘ್ನಬರುತ್ತಿದ್ದರಿಂದ ಆತನಿಗೆ ಈ ದೈವತ್ವದ ಆಮಿಷ ಒಡ್ಡಿ ಆತನನ್ನು ಗಣಪತಿಯಾಗಿಸಿ ತಮ್ಮ ಕಾರ್ಯದಲ್ಲಿ ಯಶಸ್ವಿಯಾದರು ಎಂಬುದನ್ನು. ಅನೇಕ ಬಾರಿ ಇಂತಹ ವಾದವನ್ನು ನಾನು ಕೇಳಿದ್ದೇನೆ.
ಹಾಗೆ ನೋಡಿದರೆ ಸಿದ್ದಲಿಂಗಯ್ಯ ಕಂಬಾಳುರವರ ‘ಮೈಥಿಲಿ’ ಕೂಡ ಇಂತಹದ್ದೇ ಒಂದು ವೈಚಾರಿಕ ಕೃತಿ ಇಂತಹ ಅನೇಕ ಕೃತಿಗಳು ಈಗಾಗಲೇ ಬಂದಿವೆ. ಅಂತಹದ್ದರಲ್ಲಿ ‘ಢುಂಡಿ’ ಕೃತಿಯನ್ನು ಸರಿಯಾಗಿ ಅಥರ್ೈಸಿಕೋಳ್ಳುವ ಮೋದಲೇ ಯೋಗೇಶ್ ಮಾಸ್ಟರ್ ರವರನ್ನು ಬಂಧಿಸಿದ್ದು ಸರಿಯಲ್ಲ. ಇಂತಹ ವರ್ತನೆಗಳಿಂದ ವೈಚಾರಿಕ ಮನಸ್ಸುಗಳಿಗೆ ಘಾಸಿಮಾಡುವ ಮೂದಲು ಕೃತಿಯ ಸಮಗ್ರ ಅಧ್ಯನಮಾಡಿ ಕ್ರಮ ಕೈ ಗೊಳ್ಳಬೇಕಿತ್ತು.ಇಂಥಹ ಅವಗಢಗಳ ಕುರಿತು ಪ್ರಜ್ಞಾವಂತರು ಇನ್ನಾದರೂ ಚಿಂತಿಸುವಂತಾಗಲಿ.
 

ಢುಂಢಿ ವಿಚಾರ… ವಿವಾದ…!
ಕೆ ನವೀನ್ ಕಮಾರ್
ಬದುಕು ಕಮ್ಯೂನಿಟಿ ಕಾಲೇಜು

ಭಾರತದ ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ತಮ್ಮ ಅಭಿಪ್ರಾಯಗಳನ್ನು, ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ಅಥವ ಹೇಳುವ ಹಕ್ಕನ್ನು ಸಂವಿಧಾನ ನೀಡಿದೆ. ಆದರೆ ಅವರ ಯಾವ ಅನಿಸಿಕೆ ಅಭಿಪ್ರಾಯಗಳೇ ಆಗಲಿ ಅದು ಅವರ ವೈಯಕ್ತಿಕವಾಗಿರುತ್ತದೆ ಮತ್ತು ಅದನ್ನು ಅವರು ಯಾರ ಮೇಲೂ ಬಲವಂತವಾಗಿ ಹೇರುವ ಹಾಗಿಲ್ಲ.
ಒಬ್ಬ ಸಾಮಾನ್ಯ ವ್ಯಕ್ತಿಯು ತನ್ನ ಅಭಿಪ್ರಾಯಗಳನ್ನು ತನ್ನ ಸ್ನೇಹಿತರ ಬಳಗದೊಂದಿಗೆ ಹಂಚಿಕೊಳ್ಳಬಹುದು ಹಾಗೆಯೇ ಒಬ್ಬ ಕಥೆಗಾರ ತನ್ನ ಕಥೆಗಳ ಮೂಲಕ ಮತ್ತು ಕವಿಗಳು ತಮ್ಮ ಕವಿತೆಯ ಮೂಲಕ ತಮ್ಮ ವಿಚಾರಗಳನ್ನು ಆಸಕ್ತರೊಂದಿಗೆ ಹಂಚಿಕೊಳ್ಳುತ್ತಾರೆ. ಅವರ ಅಭಿಪ್ರಾಯಗಳನ್ನು ಒಪ್ಪುವುದು ಬಿಡುವುದು ಅದನ್ನು ಕೇಳುವವರ, ಓದುವವರ ವಿವೇಚನೆಗೆ ಬಿಟ್ಟದ್ದು. ಯಾರ ಮೇಲೂ ಯಾರೂ ತಮ್ಮ ವಿಚಾರಗಳನ್ನು ಬಲವಂತಾಗಿ ಹೇರುವುದಿಲ್ಲ. ಹಾಗೆಯೇ ಇಂತಹ ವಿಚಾರಗಳನ್ನು ಪಡೆದುಕೊಳ್ಳುವವರು ಸಹ ಪ್ರತಿಕ್ರಯೆಗಳನ್ನು ನೀಡಬಹುದೇ ವಿನಹ ಯಾರ ಅಭಿವ್ಯಕ್ತಿ ಸ್ವಾತಂತ್ರಯವನ್ನೂ ಕಸಿದುಕೊಳ್ಳುವ ಹಕ್ಕು ಅವರಿಗಿರುವುದಿಲ್ಲ.
ಆದರೆ ಇತ್ತೀಚಿಗೆ ಢುಂಢಿ ಕಾದಂಬರಿ ಕುರಿತಂತೆ ಆಗುತ್ತಿರುವುದೇ ಬೇರೆ. ಢುಂಢಿಯ ಕಾದಂಬರಿಕಾರ ಯೋಗೇಶ್ ಮಾಸ್ಟರ್ ತಮ್ಮ ಕಾದಂಬರಿಯಲ್ಲಿ ಹಿಂದುಗಳ ನಂಬಿಕೆಗೆ ಚ್ಯುತಿ ತಂದಿದ್ದಾರೆ, ಅವರು ಹಿಂದು ದೇವತೆ ಶ್ರೀ ಗಣೇಶನನ್ನು ಕ್ರೂರಿ, ರಕ್ಕಸ ಎಂಬಂತೆಲ್ಲಾ ಚಿತ್ರಿಸಿದ್ದಾರೆ ಎಂದು ಹಲವು ಪ್ರತಿಭಟನೆಗಳನ್ನು ಮತ್ತು ಅವರ ವಿರುದ್ಧ ವಾಕ್ಸಮರವನ್ನು ಅನೇಕ ಹಿಂದು ಧರ್ಮ ಸಂಘಟನೆಗಳು ನಡೆಸಿದವು. ಇಲ್ಲಿಯವರೆಗೂ ಎಲ್ಲವೂ ಸರಿ ಇತ್ತೆಂದೇ ಹೇಳಬಹುದು. ಹೇಗೆ ಯೋಗೇಶ್ ಮಾಸ್ಟರ್ಗೆ ತಮ್ಮ ವಿಚಾರಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆಯೋ ಹಾಗೆಯೇ ಇತರರಿಗೂ ಅವರ ಅಭಿಪ್ರಾಯಗಳನ್ನು ತಿಳಿಯಪಡಿಸುವ ಸಾಂವಿಧಾನಿಕ ಹಕ್ಕಿದೆ.
ಆದರೆ ನಿಜವಾದ ಎಡವಟ್ಟು ಆಗಿದ್ದು ಕಾದಂಬರಿಕಾರ ಯೋಗೇಶ್ ಮಾಸ್ಟರ್ ಬಂಧನವಾದಾಗ. ಯಾವ ಸ್ವಾತಂತ್ರ್ಯವನ್ನು ಸಂವಿಧಾನ ನಮಗೆ ಕೊಟ್ಟಿದೆಯೋ ಅದನ್ನು ನಮ್ಮ ಸಕರ್ಾರಗಳು ಕೇವಲ ಕೆಲವು ಹಿತಾಸಕ್ತಿಗಳನ್ನು ಓಲೈಸಿಕೊಳ್ಳಲು ಅಥವಾ ತಮ್ಮ ಬೇಳೆ ಕಾಳು ಬೇಯಿಸಿಕೊಳ್ಳಲು ಕಸಿದುಕೊಳ್ಳುವುದು ಎಷ್ಟು ಸೂಕ್ತ? ಇಲ್ಲಿ ಯೋಗೇಶ್ ಮಾಸ್ಟರ್ರವರು ಏನನ್ನು ಹೇಳಿದ್ದಾರೆ ಅಥವಾ ಅವರು ಹೇಳಿರುವುದು ಯಾವ ಆಧಾರದ ಮೇಲೆ? ಎಂದು ತಿಳಿದುಕೊಂಡು ಮುಂದುವರಿದಿದ್ದರೆ ಬಹುಶ: ಇಂದು ಅವರ ಬಂಧನ ಇಷ್ಟು ದೊಡ್ಡಮಟ್ಟದ ವಿವಾದವಾಗುತ್ತಿರಲಿಲ್ಲ ಅನಿಸುತ್ತದೆ. ಒಂದೊಮ್ಮೆ ಅವರು ಇಲ್ಲಿ ಗಣೇಶನನ್ನು ಕೆಟ್ಟದಾಗಿ ಅಥವ ದುಷ್ಟ, ಕ್ರೂರಿ ಎಂದು ಚಿತ್ರಿಸಿದ್ದಾರೆಂದೇ ಅಂದುಕೊಂಡರೂ ಅದಕ್ಕೆ ಅವರು ಆಧಾರವಾಗಿಟ್ಟುಕೊಂಡು ಅಧ್ಯಯನ ನಡೆಸಿದ ಕೃತಿಗಳೂ ಪ್ರಭಾವ ಬೀರಿರುತ್ತವೆ. ಅಂದರೆ ಆ ಕೃತಿಗಳನ್ನೋ ಅಥವ ಕಾದಂಬರಿಯನ್ನೋ ಬೇರೆ ಇನ್ನೊಬ್ಬ ವ್ಯಕ್ತಿಯು ಬರೆದಿರುತ್ತಾನೆ. ಅಂದ ಮೇಲೆ ಅವನ ವಿರುದ್ಧ ನಡೆಯದ ಹೋರಾಟಗಳು, ಅವನ ವಿರುದ್ಧ ನಡೆಯದ ಟೀಕೆಗಳು ಕೇವಲ ಯೋಗೇಶ್ ಮಾಸ್ಟರ್ರವರ ವಿರುದ್ಧ ಮಾತ್ರ ಏಕೆ ನಡೆಯಬೇಕು?
ಯೋಗೇಶ್ರವರು ತಾವು ಕಂಡಂತೆ ಅಥವಾ ತಾವು ತಿಳಿದಂತೆ ಸಂದರ್ಭಕ್ಕನುಸಾರವಾಗಿ ಓದುಗನಿಗೆ ವ್ಯಕ್ತಿ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ಅದು ಒಪ್ಪುವುದು ಬಿಡುವುದು ಓದುಗನಿಗೆ ಬಿಟ್ಟದ್ದು. ಆದ್ದರಿಂದ ಕೇವಲ ತಮ್ಮ ರಾಜಕೀಯ ದಾಳಗಳನ್ನು ಉಳಿಸಿಕೊಳ್ಳಲು ಮತ್ತು ಬಿಟ್ಟಿ ಪ್ರಚಾರಕ್ಕಾಗಿ ತಮ್ಮ ಅಭಿಪ್ರಾಯಗಳನ್ನು ಬಲವಂತವಾಗಿ ಎಲ್ಲರ ಮೇಲೂ ಹೇರುವ ಹುಂಬತನವನ್ನು ಈ ಸೋಕಾಲ್ಡ್ ಸಂಘಟನೆಗಳು ಇಲ್ಲಿಗೇ ನಿಲ್ಲಿಸಿ, ನಿಜವಾದ ಸಮಾಜ ಸುಧಾರಣೆಯಲಿ ತೊಡಗಿಕೊಂಡರೆ ಎಲ್ಲ ಸಮುದಾಯ, ಸಮಾಜದವರಿಗೂ ಒಳಿತಾದೀತು.

ನವೀನ್ ಕುಮಾರ್
ಇನ್ನಾದರೂ ನನ್ನನ್ನು ನನ್ನ ಇಚ್ಛೆಯಂತೆ ಬದುಕಲು ಬಿಡಿ… ಇದು ಆ ಮುದಿ ಜೀವದ ಎಷ್ಟೋ ವರ್ಷಗಳ ಕೂಗು. ಆದರೆ ಕೇಳುವರಾರು? ಎಂಬುದೇ ಆಕೆಯ ಪ್ರಶ್ನೆ. ಜೀವನದ ಕಷ್ಟ ಸುಖಗಳನ್ನು ಕೊನೆವರೆಗೂ ಹಂಚಿಕೊಳ್ಳುತ್ತೇನೆ ಎಂದು ಕೈ ಹಿಡಿದ ಗಂಡ ಅರ್ಧದಲ್ಲೇ ತನ್ನ ಪಯಣವನ್ನು ಮುಗಿಸಿ ನಡುನೀರಿನಲ್ಲಿ ಕೈ ಬಿಟ್ಟು ಹೋಗಿದ್ದ. ಇನ್ನು ಮಕ್ಕಳೋ, ಅವರ ಲೋಕ ಅವರದು. ನಿಷ್ಟ್ರಯೋಜಕರೇನಲ್ಲ. ಆದರೆ ಪ್ರಯೋಜಕರು ಎಂದು ಹೇಳಿಕೊಳ್ಳುವ ಮಟ್ಟಕ್ಕೂ ಇನ್ನು ಬೆಳೆದಿಲ್ಲ. ತಮ್ಮ ಜೀವನವನ್ನು ಸಾಗಿಸುವ ಸಾಮಥ್ರ್ಯವಿದೆ, ಆದರೆ ಇನ್ನು ಜೀವನವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹುಡುಗಾಟಿಕೆ ಬಿಟ್ಟಿಲ್ಲ, ಹೀಗೆಯೇ ಈಸಿ ಚೇರ್ನಲ್ಲಿ ಕುಳಿತು ಏನೇನೋ ಯೋಚಿಸುತ್ತಿದ್ದ ಆಕೆಗೆ ಯಾರೋ ಬಾಗಿಲು ಬಡಿದ್ದದ್ದು ಕೇಳಿ ಎಚ್ಚರವಾಯಿತು. ಯಾರಿರಬಹುದು ಎಂದು ಗೊಣಗಿಕೊಳ್ಳುತ್ತಲೇ ಕುಳಿತಲ್ಲಿಂದ ಎದ್ದು ಬಂದು ಬಾಗಿಲು ತೆರೆದಾಕೆಗೆ ಎದುರಿಗೆ ಕಂಡದ್ದು ಪೋಸ್ಟ್ಮಾನ್. ಅವನು ನೀಡಿದ ಒಂದು ಲಕೋಟೆಯನ್ನು ಪಡೆದು ಮತ್ತೆ ಬಾಗಿಲು ಮುಚ್ಚಿ ತನ್ನ ಆರಾಮ ಕುರ್ಚಿಯಲ್ಲಿ ಕುಳಿತು ಯೋಚಿಸತೊಡಗಿದಳು.
ಹಾಗೆಯೇ ಕಣ್ಣು ಮುಚ್ಚುತ್ತಿದ್ದಂತೆ ಅವಳೆದುರಿಗೆ ತನ್ನ ಬಾಲ್ಯದಿಂದ ಇಲ್ಲಿಯವರೆಗಿನ ಎಲ್ಲ ಘಟನೆಗಳೂ ಸಿನಿಮಾ ರೀಲಿನಂತೆ ಎದುರಿಗೆ ಬರತೊಡಗಿದವು. ಇನ್ನೂ ಹತ್ತನೇ ತರಗತಿ ಪಾಸಾಗಿರಲಿಲ್ಲ, ವಯಸ್ಸು ಹದಿನಾರು ಕೂಡ ದಾಟಿರಲಿಲ್ಲ. ಆಗಲೇ ಮನೆಯಲ್ಲಿ ಮದುವೆಯ ಒತ್ತಡ ಶುರುವಾಗಿತ್ತು. ಅದು ಹೇಗೋ ಕಾಡಿ ಬೇಡಿ, ರಂಪ ಮಾಡಿ, ಉಪವಾಸವಿದ್ದು ಏನೇನೋ ಕಷ್ಟಪಟ್ಟು ಅಂತೂ ಮದುವೆಯ ಪ್ರಸ್ತಾಪಗಳನ್ನು ನಿಲ್ಲಿಸಿದ್ದಾಯಿತು. ಓದು ಮುಂದುವರೆಸಲೂ ಪಟ್ಟ ಕಷ್ಟ ಅಷ್ಟಿಷ್ಟೇನಲ್ಲ. ಶಾಲೆಯಲಿ ಮಾಸ್ತರ್ ಆಗಿ ಕೆಲಸ ಮಾಡುತಿದ್ದ ಅಣ್ಣನೂ ತನ್ನ ಓದಿಗೆ ಬೆಂಬಲ ಕೊಡದೇ, ಹೆಣ್ಣು ಹುಡುಗಿಯರಿಗೇಕೆ ಹೆಚ್ಚಿನ ಓದು, ಮದುವೆ ಮಾಡಿಕೊಂಡು ಹೋಗೋದು ಬಿಟ್ಟು, ಎಂದು ಬೈಯೋದು. ಆದರೂ ತನ್ನ ಓದುವ ಆಸೆಗೆ ಇತಿಶ್ರೀ ಹಾಡದೆ, ಹೇಗೋ ಮನೆಯವರನ್ನು ಒಪ್ಪಿಸಿ ಓದು ಮುಂದುವರೆಸಿದ್ದು, ದೊಡ್ಡ ಸಾಹಸವೇ ಆಗಿತ್ತು. ಅಂತೂ ಹೇಗೋ ಎಸ್.ಎಸ್.ಎಲ್.ಸಿ. ಪಾಸ್ ಮಾಡಿಕೊಂಡು ಪಿ.ಯು.ಸಿ ಮೆಟ್ಟಿಲು ಏರಿದಾಗ ಆದ ಸಂತೋಷ ಅಷ್ಟಿಷ್ಟಲ್ಲ.
ಪಿ.ಯು. ಮೊದಲ ವರ್ಷ ಮುಗಿಯುತ್ತಿದ್ದಂತೆ ಮತ್ತೆ ಮನೆಯವರಿಂದ ಮದುವೆಯ ಕ್ಯಾತೆ. ತನಗೋ ಈಗಲೇ ಮದುವೆಯಾಗುವ ಆಲೋಚನೆಗಳೇ ಇಲ್ಲ. ಇನ್ನೂ ಓದಬೇಕು. ತನ್ನ ಕಾಲ ಮೇಲೆ ತಾನು ನಿಲ್ಲಬೇಕೆಂಬ ಆಸೆ. ಆದರೆ ಮನೆಯಲ್ಲಿ ಇದಕ್ಕೆ ಬೆಂಬಲ ಕೊಡುವವರ್ಯಾರು? ಆಗಲೇ ಹೈಸ್ಕೂಲ್ ಓದುವಾಗ ಕಲಿತ ಟೈಪ್ರೈಟಿಂಗ್ ನೆರವಿಗೆ ಬಂದದ್ದು. ಯಾವುದೋ ಸರ್ಕಾರಿ ಕಛೇರಿಯಲ್ಲಿ ದಿನಗೂಲಿ ನೌಕರಳಾಗಿ ಕೆಲಸ ಮಾಡುತಿದ್ದ ಗೆಳತಿಯೊಬ್ಬಳು ಅದೇ ಕಛೇರಿಯಲ್ಲಿ ಟೈಪಿಸ್ಟ್ನ ಅವಶ್ಯಕತೆ ಇದೆ ಎಂದಾಗ ಆಕೆ ತನಗೆ ಸಾಕ್ಷಾತ್ ವರಮಹಾಲಕ್ಷ್ಮಿಯಂತೆಯೇ ಕಂಡಿದ್ದಳು. ಖುಷಿಯಿಂದ ಮನೆಗೆ ಹೋಗಿ ವಿಷಯ ಹೇಳಿದರೆ ಹೆಣ್ಣು ಮಗಳು, ಅದರಲ್ಲೂ ಬ್ರಾಹ್ಮಣರ ಮನೆ ಹುಡುಗಿ ಹೊರ ಹೋಗಿ ದುಡಿಯುವುದೇ? ಸಾಧ್ಯವೇ ಇಲ್ಲ ಎಂದು ಅಪ್ಪ ಖಡಾಖಂಡಿತವಾಗಿ ಹೇಳಿದ್ದು ಕೇಳಿ ತನ್ನ ಆಸೆಯಲ್ಲಕ್ಕೂ ತಣ್ಣೀರೆರಚಿದಂತಾಗಿತ್ತು. ಆದರೂ ಪಟ್ಟು ಬಿಡದೆ, ಕಾಡಿ ಬೇಡಿ ತನ್ನ ಸ್ನೇಹಿತೆಯಿಂದಲೂ ಹೇಳಿಸಿ ಅದು ಹೇಗೋ ಅಪ್ಪನನ್ನು ಒಪ್ಪಿಸುವುಷ್ಟರಲ್ಲಿ ಸಾಕುಬೇಕಾಗಿತ್ತು. ಒಪ್ಪಿಕೊಂಡರೂ ಅಪ್ಪ ಸುಮ್ಮನೆ ಒಪ್ಪಿದ್ದರೆ. ನೂರೊಂದು ಕಂಡೀಷನ್ಗಳು. ಇಷ್ಟೊತ್ತಿಗೆ ಮುಂಚೆ ಬರಲು ಸಾಧ್ಯವಿಲ್ಲ. ಸಂಜೆ ಐದು ಗಂಟೆಗೆಲ್ಲಾ ಮನೆಯಲ್ಲಿರಬೇಕು. ಒಬ್ಬಳೇ ಹೋಗೋ ಹಾಗಿಲ್ಲ. ಅದು ಇದು ಏನೇನೋ ಹೇಳಿದ್ದಾವುದೂ ನನ್ನ ಕಿವಿಗೇ ಬಿದ್ದಿರಲಿಲ್ಲ. ಇನ್ನಾದರೂ ನನಗೆ ಸ್ವಲ್ಪ ಸ್ವಾತಂತ್ರ್ಯ ಸಿಕ್ಕಿತಲ್ಲ ಎಂಬ ಖುಷಿಯೊಂದೇ ಇದ್ದದ್ದು.

ಮೊದಲ ದಿನ ಕೆಲಸಕ್ಕೆ ಹೋದಾಗ ಆದ ಆನಂದ ಅಷ್ಟಿಷ್ಟಲ್ಲ. ಆದರೆ ಬರಬರುತ್ತಾ ಅಲ್ಲೂ ಒತ್ತಡಗಳಿದ್ದವು. ಜೊತೆಗೆ ಅರ್ಧಕ್ಕೆ ನಿಲ್ಲಿಸಿದ ಓದನ್ನೂ ಮುಂದುವರೆಸಿದ್ದು. ಹೇಗೋ ಎಲ್ಲವನ್ನೂ ಸರಿದೂಗಿಸಿಕೊಂಡು ಕೊನೆಗೂ ಒಂದು ಡಿಗ್ರಿ ಅಂತ ಪಡೆದುಕೊಂಡದ್ದಾಯಿತು. ಮಾಡುತಿದ್ದದ್ದು ಸಕರ್ಾರಿ ಕಛೇರಿಯ ಕೆಲಸವೇ ಆದರೂ ದಿನಗೂಲಿ ನೌಕರಳಾಗಿ. ಓದು ಮುಗಿಯಿತು ಈಗಲಾದರೂ ಮದುವೆ ಮಾಡಿಕೋ ಎಂಬ ಮಾತುಗಳು ಮತ್ತೆ ಮನೆಯಲ್ಲಿ ಕಿರಿಕಿರಿಯನ್ನುಂಟು ಮಾಡಲಾರಂಭಿಸಿದವು. ಕೊನೆಗೂ ಹೇಗೋ ಸರಿ ಎಂದು ಒಪ್ಪಿಕೊಂಡೆ. ಅಷ್ಟೊತ್ತಿಗಾಗಲೇ ಅಣ್ಣ ನಮ್ಮಿಂದ ದೂರಾಗಿದ್ದ. ತನ್ನ ಸಂಸಾರದೊಂದಿಗೆ ಬೇರೆ ಬದುಕುತಿದ್ದ. ಅಪ್ಪ, ಅಮ್ಮನನ್ನು ಒಂಟಿಯಾಗಿ ಬಿಟ್ಟು ಹೋಗುವ ಮನಸಿಲ್ಲ. ಆದರೆ ಮದುವೆಯ ಒತ್ತಡ ಇದ್ದದ್ದೇ ಅವರಿಂದ, ಅದಕ್ಕೇ ಒಪ್ಪಿಕೊಂಡದ್ದಾಯಿತು. ಎರಡು ಮೂರು ಸಂಬಂಧಗಳು ಬಂದರೂ ಯಾವುದೂ ಒಪ್ಪಿಗೆಯಾಗಿರಲಿಲ್ಲ. ಸರಿ, ಸ್ವಲ್ಪದಿನ ಇದನ್ನೆಲ್ಲಾ ನಿಲ್ಲಿಸಿ ಎಂದು ಹೇಳೋಣ ಎಂದುಕೊಳ್ಳುತ್ತಿರುವಾಗಲೇ ಅಪ್ಪನಿಗೆ ಪಾಶ್ರ್ವವಾಯು ಬರಸಿಡಿಲಿನಂತೆ ಬಂದೆರಗಿತ್ತು. ಅಮ್ಮನಿಗೂ ವಯಸ್ಸಾಗಿತ್ತು ಬೇರೆ. ಮನೆ ಕೆಲಸ, ಆಫೀಸ್, ಅಪ್ಪನ ಆರೋಗ್ಯ ಇವುಗಳಲ್ಲಿ ಮದುವೆಯ ವಿಚಾರವನ್ನು ತಾನೂ ಮರೆತುಬಿಟ್ಟಳು, ಮನೆಯಲ್ಲೂ ಯಾರೂ ಅದರ ಬಗ್ಗೆ ಮಾತನಾಡಲಿಲ್ಲ. ಹೇಗೋ ಎರಡು ವರ್ಷ ಕಳೆಯುವಷ್ಟರಲ್ಲಿ ತೀರ ನಿಶಕ್ತನಾಗಿದ್ದ ಅಪ್ಪನೂ ಅಗಲಿಹೋದ. ಈಗ ಅಮ್ಮನ ಮತ್ತು ಮನೆಯ ಸಂಪೂರ್ಣ ಜವಾಬ್ದಾರಿ ತನ್ನ ಮೇಲೇಯೇ ಬಿದ್ದಿತ್ತು. ಆದರೆ ಈಗ ಅಮ್ಮ ಮದುವೆಯ ಜಪ ಮಾಡಲು ಶುರುವಿಟ್ಟಿದ್ದಳು.
ಸರಿ ಎಂದು ಒಪ್ಪಿಕೊಂಡೆ. ಒಂದೆರಡು ವರ್ಷಗಳಲ್ಲಿ ಮದುವೆಯೂ ಆಯಿತು. ಗಂಡನಿಗೆ ನನ್ನೂರಲ್ಲೇ ಕೆಲಸ ಸಿಕ್ಕದ್ದು, ನಾನು ಮನೆಯಿಂದ ದೂರವಾಗದಂತೆ ಮಾಡಿದ್ದೊಂದೇ ಆಗ ನನಗೆ ಖುಷಿಕೊಟ್ಟ ವಿಚಾರ ಅನಿಸುತ್ತದೆ. ಅಷ್ಟೊತ್ತಿಗಾಗಲೇ ಅಣ್ಣನೂ ವಾಪಾಸ್ ಬಂದಿದ್ದ. ನನ್ನ ಸಂಸಾರ, ಜೊತೆಗೆ ಅಮ್ಮನ ಆರೋಗ್ಯ, ಕೆಲಸ, ಮದುವೆಯಾದ ನಾಲ್ಕು ವರ್ಷಗಳಲ್ಲೇ ಎರಡು ಮಕ್ಕಳು, ಅವರ ಆರೈಕೆ ಇದೇ ನಿತ್ಯ ಕಾಯಕದಂತಾಗಿ ಹೋಗಿತ್ತು. ಇವುಗಳ ಮಧ್ಯೆ ಮತ್ತೊಂದು ಸಂತೋಷದ ಸಂಗತಿಯೆಂದರೆ ಸುಮಾರು ವರ್ಷಗಳ ನಂತರ ತನ್ನನ್ನು ಖಾಯಂ ನೌಕರಳಾಗಿ ಪರಿಗಣಿಸಿರುವ ಆದೇಶ ಬಂದದ್ದು. ಆಗಲೇ ತನ್ನ ಜೀವನಕ್ಕೆ ಒಂದು ನೆಲೆ ಸಿಕ್ಕಿದೆ ಎಂಬ ಭಾವ ಮತ್ತು ತಾನು ಅಂದುಕೊಂಡದ್ದನ್ನು ಸಂಪೂರ್ಣವಾಗಲ್ಲದ್ದಿದ್ದರೂ ಕೊಂಚಮಟ್ಟಿಗೆ ಸಾಧಿಸಿದ್ದೇನೆಂಬ ಭಾವ ಮೂಡಿತ್ತು. ಆದರೆ ಈಗಲೂ ತಾನಂದುಕೊಂಡ ಸ್ವಾತಂತ್ರ್ಯ ತನಗೆ ಸಿಕ್ಕಿರಲಿಲ್ಲ. ಜೀವನದ ಜಂಜಾಟಗಳೇನೂ ತಪ್ಪಿರಲಿಲ್ಲ. ಸಂಸಾರದ ಒತ್ತಡಗಳು, ಮಕ್ಕಳ ಓದು ಅವರ ಆರೋಗ್ಯ ಹೀಗೆ ಈಗಲೂ ತನ್ನ ಜೀವನವನ್ನು ಯಾರೋ ನಿಯಂತ್ರಿಸುತ್ತಿದ್ದಾರೆ ಎನಿಸುತಿತ್ತು. ಸರಿ ಪಾಲಿಗೆ ಬಂದದ್ದು ಪಂಚಾಮೃತ ಎಂದು ಬಾಳತೊಡಿಗಿದೆ. ಮಕ್ಕಳೂ ಬೆಳೆದು ದೊಡ್ಡವರಾಗುತ್ತಿದ್ದರು. ಆಗ ಮತ್ತೊಂದು ಆಘಾತ, ಕೊನೆಯವರೆಗೂ ಜೊತೆಗಿರಬೇಕಾದವನು ಮಧ್ಯದಲ್ಲೇ ತನ್ನ ಜೀವನದ ಆಟ ಮುಗಿಸಿಹೋಗಿದ್ದ. ಆದರೆ ಧೃತಿಗೆಡುವ ಹಾಗಿಲ್ಲ. ಮಕ್ಕಳ ಭವಿಷ್ಯ ರೂಪಿಸಬೇಕು. ಅವರು ಒಂದು ನೆಲೆಯನ್ನು ಕಂಡುಕೊಳ್ಳುವವರೆಗೂ ತಾನು ಧೈರ್ಯದಿಂದರಬೇಕು, ಕಷ್ಟ ಪಡಲೇಬೆಂಬ ಛಲ ಹೇಗೋ ಇಲ್ಲಿಯವರೆಗೂ ನೂಕಿಸಿಕೊಂಡು ಬಂದಿದೆ. ಈಗ ಮಕ್ಕಳು ಬೆಳೆದು ದೊಡ್ಡವರಾಗಿದ್ದಾರೆ. ಅವರೂ ತಮ್ಮ ಕಾಲ ಮೇಲೆ ತಾವು ನಿಂತಿದ್ದಾರೆ. ನಿರ್ವಹಣೆಗೆ ಬೇಕಾಗುವಷ್ಟು ಸಂಪಾದನೆಯನ್ನೂ ಮಾಡುತ್ತಿದ್ದಾರೆ.
ಈಗ ತಾನು ಒಂದಷ್ಟು ಸ್ವತಂತ್ರಳು. ಯಾರಿಗಾಗಿಯೋ, ಯಾರ ಅಧೀನದಲ್ಲೋ ಬದುಕುವ ಜರೂರು ಇನ್ನು ತನಗಿಲ್ಲ. ಇನ್ನಾದರೂ ಸ್ವೇಚ್ಛೆಯಿಂದ ಬದುಕಬೇಕು, ನಾನು ಬೇಕೆಂದುಕೊಂಡಿದ್ದ ಸ್ವಚ್ಛ ಗಾಳಿಯ ಆಹ್ಲಾದವನ್ನು ಸವಿಯಬೇಕು ಎಂದುಕೊಳ್ಳುತ್ತಿದ್ದವಳಿಗೆ, ಅಮ್ಮ ಹೊಟ್ಟೆ ಹಸಿಯುತ್ತಿದೆ, ಊಟಕ್ಕೆ ಬಡಿಸು ಎಂಬ ಕೂಗು ತನ್ನ ಆಲೋಚನೆಯ ಲೋಕದಿಂದ ಹೊರ ಬರುವಂತೆ ಮಾಡಿತ್ತು. ಮಗ ಊಟಕ್ಕೆ ಬಂದನೆಂದು ಅವನಿಗೆ ಬಡಿಸಲು ಎದ್ದವಳಿಗೆ ಮತ್ತೆ ಕಾಡಿದ್ದು, ನಿಜಕ್ಕೂ ನಾನೀಗ ಸ್ವತಂತ್ರಳೇ? ಎಂಬ ಪ್ರಶ್ನೆ. ಮತ್ತೆ ಮನದಾಳದಿಂದ ಹೊರ ಬಂದ ಕೂಗು, ‘ಇನ್ನಾದರೂ ನನ್ನನ್ನು ನನ್ನ ಇಚ್ಛೆಯಂತೆ ಬದುಕಲು ಬಿಡಿ’……