Sunday, June 7, 2015

‘ದಿ ಲಾಸ್ಟ್ ಶೋ' February 9th, 2015

ಬರೊಬ್ಬರಿ 3 ವರ್ಷಗಳ ನಂತ್ರ ಅವ್ನು ಇಷ್ಟೊಂದು ಖುಷಿಯಾಗಿದ್ದ. ಇವತ್ತು ಅವ್ನ 25ನೇ ವರ್ಷದ ಹುಟ್ಟುಹಬ್ಬ. ಅದೂ ಕೂಡ ಸ್ಕೂಲ್ ರೆಕಾರ್ಡ್ಗಳ ಪ್ರಕಾರ. ಅನಾಥನಾಗಿ ಬೆಳೆದ ಅವ್ನಿಗೆ ಅವ್ನು ಹುಟ್ಟಿದ ಡೇಟ್ ಕೂಡ ಗೊತ್ತಿಲ್ಲ. ಆದ್ರೆ ಶಾಲೆಗೆ ಸೇರೋವಾಗ ಅವ್ನಿದ್ದ ಅನಾಥಶ್ರಮದ ವಾರ್ಡನ್ ಯಾವ್ದೋ ಒಂದು ಡೇಟ್ ಬರ್ಸಿದ್ರು. ಅಷ್ಟೇ ಅಲ್ಲ, ಅವ್ನಿಗೆ ಅಂತ ಒಂದು ಹೆಸ್ರು ಸಿಕ್ಕಿದ್ದು ಸಹ ಅವತ್ತೆ. ಅಲ್ಲಿವರ್ಗೂ ಯಾರ್ ಏನ್ ಕರೆದ್ರೆ, ಅದೇ ಅವ್ನ ಹೆಸ್ರು ಅನ್ನೋ ಹಾಗಾಗಿತ್ತು. ಆದ್ರೆ ಸ್ಕೂಲ್ಗೆ ಜಾಯಿನ್ ಆದ ದಿನ ಅವ್ನಿಗೆ ಅಂತ ಒಂದು ಅಧಿಕೃತ ದಾಖಲೆ ಸಿಕ್ತು. ಅವತ್ತಿಂದ ತಾನೂ ಎಲ್ಲರಂತೆಯೇ ಅಂತ ಅವ್ನು ಫೀಲ್ ಆಗೋಕೆ ಶುರು ಮಾಡ್ದ. ಅದ್ಹೇಗೋ ಒಂದು ಡಿಗ್ರಿ ಅಂತ ಮುಗಿಸ್ಕಂಡ. ಆದ್ರೆ ಚಿಕ್ಕಂದಿನಿಂದ್ಲೂ ಸಿನಿಮಾ ಅಂದ್ರೆ, ಅವ್ನಿಗೆ ಅದೇನೋ ಅಟ್ರಾಕ್ಷನ್. ದೊಡ್ಡೋನಾದ್ಮೇಲೆ ನಾನು ಸಿನಿಮಾ ಡೈರೆಕ್ಟ್ರೇ ಅಗೋದು ಅಂತ ಅವ್ನು ಆಗ್ಲೇ ಡಿಸೈಡ್ ಮಾಡಿದ್ದ. ಅದ್ಕೆ, ಡಿಗ್ರಿ ಆಗ್ತಿದ್ದಂಗೆ ಯಾವ್ದೊ ಒಬ್ಬ ಡೈರೆಕ್ಟ್ರ ಹತ್ರ ಹೋಗಿ ಅಸಿಸ್ಟೆಂಟ್ ಆಗಿ ಸೇರಿದ. ಅಲ್ಲಿಂದ ಇಲ್ಲಿಗೆ 5 ವರ್ಷಗಳ ಪಯಣ. ಇನ್ನೂ ತನಗೆ ಡೈರೆಕ್ಟ್ರಾಗೋ ಪಕ್ವತೆ ಬಂದಿಲ್ಲ ಅಂತಲೇ ಭಾವಿಸಿದ್ದಾನೆ. ಆದ್ಕೆ, ತನ್ನದೇ ಚಿತ್ರವನ್ನ ನಿರ್ದೇಶಿಸೋಕೆ ಹಿಂದೇಟು ಹಾಕ್ತಾ ಇದಾನೆ. ಆದ್ರೆ, ಅವ್ನಿಗೂ ಗೊತ್ತು ಇನ್ನು ತನ್ನ ಬಳಿ ಹೆಚ್ಚಿನ ಸಮಯ ಇಲ್ಲ ಅಂತ. ಯಾಕಂದ್ರೆ ಅವ್ನು ಬದುಕಿರೋದು ಇನ್ನು ಬರೀ 2 ವರ್ಷ ಮಾತ್ರ.
ಮೂರು ವರ್ಷದ ಹಿಂದೆ, ಅದೊಂದ್ ದಿನ ಬೆಳಗಿನಿಂದ ಯಾಕೋ ಮೈ ಹುಷಾರಿಲ್ಲ ಅಂತ ಅನಿಸ್ತಾ ಇತ್ತು ಅವ್ನಿಗೆ. ಆದ್ರೆ ಅದರ ಕಡೆ ಅಷ್ಟು ಗಮನ ಕೊಟ್ಟಿರಲಿಲ್ಲ. ಕಳೆದ 5 ದಿನಗಳಿಂದ ಹಗಲು, ರಾತ್ರಿ ಅನ್ನದೇ ಕಂಟಿನ್ಯೂ ಆಗಿ ಶೂಟಿಂಗ್ ಮಾಡ್ತಾ ಇರೋದ್ರಿಂದ ಸುಸ್ತಾಗಿರ್ಬೋದು ಅನ್ಕಂಡ. ಆದ್ರೆ ಮಧ್ಯಾಹ್ನ ಸೆಟ್ನಲ್ಲೇ ತಲೆ ಸುತ್ತಿ ಬಿದ್ದವನು, ಎಚ್ಚೆತ್ತಿದ್ದು ಆಸ್ಪತ್ರೆ ಬೆಡ್ ಮೇಲೆ. ಅವನನ್ನ ಪರೀಕ್ಷಿಸಿದ ಡಾಕ್ಟ್ರು ಈಗ ರೆಸ್ಟ್ ಮಾಡಿ, ನಾಳೆ ನಿಮ್ಗೆ ಒಂದಷ್ಟು ಟೆಸ್ಟ್ ಮಾಡ್ಸೋಕಿದೆ ಅಂತ ಹೇಳಿ ಇವ್ನ ಮಾತಿಗೂ ಕಾಯ್ದೆ ಹೊರಟು ಹೋಗಿದ್ರು. ಆ ರಾತ್ರಿನಾ ಅವ್ನು ಅದ್ಹೇಗೆ ಆಸ್ಪತ್ರೆಯಲ್ಲಿ ಕಳೆದ್ನೋ ಅವ್ನಿಗೇ ಗೊತ್ತು. ಮರುದಿನ ಬೆಳಗ್ಗೆನೇ ಆ ಟೆಸ್ಟು, ಈ ಟೆಸ್ಟು ಅಂತ ಎಲ್ಲಾ ಮಾಡ್ಸಿದ್ದಾಯ್ತು. ಅವತ್ತು ಅವನನ್ನ ಡಿಸ್ಚಾರ್ಜ್ ಮಾಡಿದ ಡಾಕ್ಟ್ರು, 2 ದಿನ ಬಿಟ್ಟು ಬಂದು ರಿಪೋರ್ಟ್ ತಗೋಳೋಕೆ ಹೇಳಿದ್ರು.
ಎರಡು ದಿನದ ನಂತ್ರ ಆಸ್ಪತ್ರೆಗೆ ಹೋದವನನ್ನ ಡಾಕ್ಟರ್​ನ ಸಪ್ಪೆ ಮುಖ ಸ್ವಾಗತಿಸಿತು. ಇವನನ್ನ ನೋಡ್ತಾ ಇದ್ದಂಗೆ ಆ ಡಾಕ್ಟ್ರು, ನೋಡಿ ಮಿಸ್ಟರ್ ನಿಮ್ಗೆ ಜೀವನದಲ್ಲಿ ಏನಾದ್ರೂ ಆಸೆಗಳು ಅಂತ ಇದ್ರೆ ಆದಷ್ಟು ಬೇಗ ತಿರಿಸ್ಕಂಡು ಬಿಡಿ ಅಂತ ನಿರ್ಭಾವುಕವಾಗಿ ಹೇಳಿದ್ರು. ಇವ್ನಿಗೆ ಏನೊಂದೂ ಆರ್ಥ ಆಗ್ಲಿಲ್ಲ. ಯಾಕೆ ಅಂತ ಕೇಳಿದ್ರೆ, ಅದ್ಯಾವುದೋ ಒಂದು ರೋಗದ ಹೆಸ್ರು ಹೇಳಿದ್ರು. ಅದೂ ಅರ್ಥ ಆಗ್ಲಿಲ್ಲ. ಆಗ ಸಮಾಧಾನದಿಂದ ಆ ಡಕ್ಟ್ರು ಹೇಳಿದ ಮಾತು ಕೇಳಿ, ಇವ್ನಿಗೆ ಆಕಾಶನೇ ಕಳಚಿ ಬಿದ್ದಂತೆ ಆಗಿತ್ತು. ಹೌದು ಮಿಸ್ಟರ್ ನಿಮಗೆ ಬಂದಿರೋದು ಇನ್ನೂ ಚಿಕಿತ್ಸೆ ಕಂಡುಹಿಡಿಯದ ರೋಗ. ನೀವು ಹೆಚ್ಚೆಂದ್ರೆ ಇನ್ನು 5 ವರ್ಷ ಬದುಕ್ತೀರಿ ಅಂತ ಆ ಡಾಕ್ಟ್ರು ಹೇಳಿದ್ರು.
ಅಷ್ಟೇ ಅವತ್ತು ಅವ್ನ ಜೀವನದಲ್ಲಿ ಮಾಯವಾದ ಖುಷಿ, ಮತ್ತೆ ಹಿಂತಿರುಗೋಕೆ ತೆಗೆದುಕೊಂಡಿದ್ದು, ಅವನ ಜೀವನದ ಅತ್ಯಮೂಲ್ಯ 3 ವರ್ಷಗಳನ್ನ. ಸದಾ ತಾನು ಸಾಯುತ್ತೇನೆ ಅನ್ನೋ ಕೊರಗಿನಲ್ಲೇ ಇದ್ದ ಅವ್ನಿಗೆ ಸ್ಪೂರ್ತಿಯಾಗಿದ್ದು ಅವ್ಳು. ಆದ್ರೆ ಅವ್ಳಿಗೂ ಗೊತ್ತಿಲ್ಲ ಇವ್ನು ಸಾಯ್ತಾನೆ ಅಂತ. ಆಕೆ, ಇವ್ನು ಅಸಿಸ್ಟೆಂಟ್ ಆಗಿದ್ದ ಒಂದು ಚಿತ್ರದಲ್ಲಿ ಸಹನಟಿಯಾಗಿ ಆಕ್ಟ್ ಮಾಡೋಕೆ ಬಂದಿದ್ದಳು. ಆಗ ಇವ್ರಿಬ್ಬರ ಪರಿಚಯವಾಗಿತ್ತು. ನಂತರ ಆ ಪರಿಚಯ ಅದ್ಯಾವಾಗ ಪ್ರೀತಿಗೆ ತಿರುಗಿತೋ, ಅವ್ನಿಗೂ ಗೊತ್ತಿಲ್ಲ, ಅವ್ಳಿಗೂ ತಿಳಿದಿಲ್ಲ. ಅವ್ರಿಬ್ರೂ ಒಬ್ಬರನ್ನೊಬ್ರು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸ್ತಾ ಇದ್ರೂ, ಇಬ್ರೂ ಬಾಯ್ಬಿಟ್ಟು ಹೇಳಿರಲಿಲ್ಲ. ಇವ್ನಿಗಂತೂ ಈಗ ಹೇಳೋ ಅವಕಾಶ ಕೂಡ ಇರಲಿಲ್ಲ. ತಾನು ಸಾಯೋದು ಖಚಿತ ಅಂತ ಗೊತ್ತಾದ್ಮೇಲೆ, ತನ್ನ ಪ್ರೀತಿಯನ್ನ ಅವಳ ಬಳಿ ಹೇಳಿ ಅದ್ಯಾಕೆ ಆಕೆನೂ ಜೀವಂತವಾಗಿ ಕೊಲ್ಲೋದು ಅಂತ ಸುಮ್ಮನಾಗಿದ್ದ. ಆದಷ್ಟು ಅವಳನ್ನ ಅವೈಡ್ ಮಾಡೋಕೆ ಶುರು ಮಾಡ್ದ. ಆದ್ರೆ ಅವ್ಳು ಮಾತ್ರ ಇವನನ್ನ ಬಿಡಲಿಲ್ಲ. ಅದ್ರಲ್ಲೂ ಇವ್ನು ಡೈರೆಕ್ಟರ್ ಆಗ್ಬೇಕು ಅಂತ ಅವ್ಳು ಸಹ ಅದೆಷ್ಟೋ ಕನಸುಗಳನ್ನ ಕಟ್ಟಿಕೊಂಡಿದ್ಳು. ಆದ್ರೆ ಇವ್ನು ಬರಬರುತ್ತಾ ಡಲ್ ಆಗ್ತಾ ಇದ್ದಿದ್ದನ್ನ ಗಮನಿಸಿ, ಮತ್ತೆ ಅವ್ನ ಆಸೆಗೆ ನೀರೆರೆದು ಪೋಷಿಸೋಕೆ ಶುರು ಮಾಡಿದ್ಳು. ಆ ಆಸೆ ಈಡೇರಿದ್ದು ಕೂಡ ಅವನ ಸಾವಿನ ಸುದ್ದಿ ತಿಳಿದ 3 ವರ್ಷಗಳ ಬಳಿಕ.
ಇವತ್ತು ಅವ್ನ ಹುಟ್ಟು ಹಬ್ಬ. ಅಷ್ಟೇ ಅಲ್ಲ, ಅವ್ನ ನಿರ್ದೇಶನದ ಮೊದಲ ಚಿತ್ರದ ಮುಹೂರ್ತ ಕೂಡ. ಈ ಚಿತ್ರದ ಹಿರೋಯಿನ್ ಅವನು ತನ್ನ ಮನಸಲ್ಲೇ ಆರಾಧಿಸ್ತಾ ಇರೋ ಅವ್ನ ದೇವತೆ. ತನ್ನ ಮೊದಲ ಸಿನಿಮಾವನ್ನೇ ಡಿಫರೆಂಟ್ ಆಗಿ ಮಾಡ್ಬೇಕು ಅಂತ ಯೋಚಿಸಿದ್ದ. ಅದಕ್ಕಾಗಿ ಸಾಕಷ್ಟು ಶ್ರಮಪಟ್ಟು ಒಂದು ಒಳ್ಳೇ ಕಥೆಯನ್ನೂ ಸಿದ್ಧಪಡಿಸಿಕೊಂಡಿದ್ದ. ಆದ್ರೆ ಅದು ಹಿರೋಯಿನ್ ಓರಿಯೆಂಟ್ ಫಿಲ್ಮ್ ಅನ್ನೋ ಕಾರಣಕ್ಕೆ ಪ್ರೊಡ್ಯೂಸರ್ಗಳು ಹಿಂದೇಟು ಹಾಕ್ತಾ ಇದ್ರು. ಆದ್ರೀಗ ಅದಕ್ಕೂ ಟೈಮ್ ಕೂಡಿ ಬಂದಿತ್ತು. ಮುಹೂರ್ತ ಮಾಡಿಕೊಂಡ ಸಿನಿಮಾ ಮರುದಿನದಿಂದ್ಲೇ ಶೂಟಿಂಗ್ ಸಹ ಆರಭಿಸಿದ್ದಾಯ್ತು. ಅದೆಷ್ಟು ಕಾಳಜಿಯಿಂದ ಅವ್ನು ಆ ಸಿನಿಮಾ ಮಾಡೋಕೆ ಶುರು ಮಾಡ್ದ ಅಂದ್ರೆ, ತನ್ನ ಆರೋಗ್ಯದ ಕಡೆ ಅವ್ನ ಗಮನ ಹರೀಲೇ ಇಲ್ಲ. ತುಂಬಾ ಉತ್ಸಾಹದಿಂದ ತನ್ನ ಚಿತ್ರವನ್ನ ಮಾಡಿ ಮುಗಿಸಿದ. ಚಿತ್ರ ಕಂಪ್ಲೀಟ್ ಆಗಿ ರಿಲೀಸ್ ಆಗೋಕೆ ಸರಿಯಾಗಿ 2 ವರ್ಷ ಹಿಡೀತು. ಇವತ್ತು ಅವ್ನ ಸಿನಿಮಾ ರಿಲೀಸ್ ಆಗ್ತಾ ಇದೆ.
ಆದ್ರೆ ಕಳೆದ ಒಂದು ತಿಂಗಳಿನಿಂದ ಅವ್ನು ಆಸ್ಪತ್ರೆಯಲ್ಲಿದ್ದಾನೆ. ಚಿತ್ರದ ಶೂಟಿಂಗ್ ಎಲ್ಲಾ ಮುಗಿದು, ಪೋಸ್ಟ್ ಪ್ರೊಡಕ್ಷನ್ ವರ್ಕ್ ಕೂಡ ಆಲ್ಮೋಸ್ಟ್ ಕಂಪ್ಲೀಟ್ ಆಗಿತ್ತು. ಆಗ ಇದ್ದಕ್ಕಿದ್ದಂತೆ ಒಂದ್ ದಿನ, ಅವ್ನಿಗೆ ಸಿಕ್ಕಾಪಟ್ಟೆ ವೀಕ್ನೆಸ್. ಹೋಗಿ ಡಾಕ್ಟ್ರಿಗೆ ತೋರಿಸಿದ್ರೆ, ಕೂಡ್ಲೆ ಅಡ್ಮಿಟ್ ಆಗೋಕೆ ಹೇಳಿದ್ರು. ಅವ್ನಿಗೆ ಅರ್ಥ ಆಗಿತ್ತು. ಇನ್ನು ತನ್ನ ಹತ್ರ ಹೆಚ್ಚು ಟೈಮ್ ಇಲ್ಲ ಅಂತ. ಆದ್ರೇನ್ ಮಾಡೋದು, ನಡೆದಾಡುವಷ್ಟು ಶಕ್ತಿ ಕೂಡ ಅವ್ನಿಗೆ ಇರ್ಲಿಲ್ಲ. ಮಾರನೇ ದಿನ ತನ್ನ ಅಸಿಸ್ಟೆಂಟ್ ಒಬ್ಬನನ್ನ ಕರೆಸಿ, ಚಿತ್ರದ ಬಾಕಿ ಇದ್ದ ಕೆಲಸ ಮುಗಿಸುವಂತೆ ಹೇಳಿದ. ಅದೆಲ್ಲಾ ಆಗಿ, ಇವತ್ತು ರಿಲೀಸ್ ಕೂಡ ಆಯ್ತು. ಆಗ ಅವ್ಳು ಅವ್ನಿಗೆ ಫೋನ್ ಮಾಡಿದ್ಳು. ತನ್ನ ಮೊದಲ ಚಿತ್ರದ ಮೊದಲ ದೃಶ್ಯಕ್ಕೆ ಜನರ ರಸ್ಪಾನ್ಸ್ ಹೇಗಿದೆ ಅನ್ನೋದನ್ನ ಕೇಳಲಿ ಅಂತ. ಆದ್ರೆ, ಆ ಕಡೆಯಿಂದ ಯಾವುದೇ ರೆಸ್ಪಾನ್ಸ್ ಬರಲಿಲ್ಲ. ಅವ್ಳಿಗೆ ಟೆನ್ಷನ್. ಆದ್ರೂ, ಸಿನಿಮಾನಾ ನೋಡ್ತಾ ಕೂತಿದ್ಳು. ಸಿನಿಮಾ ನೋಡ್ತಾ ಹೋದಂಗೆ ಅವ್ಳಿಗೆ ಅದ್ಯಾಕೋ ಅವಳದೇ ಕಥೆ ಅನಿಸ್ತಾ ಹೋಯ್ತು. ಆದ್ರೆ ಸಿನಿಮಾ ಮುಂದುವರೀತಿದ್ದ ಹಾಗೆ ಅವ್ಳಿಗೆ ಅರ್ಥ ಆಗ್ತಾ ಹೋಯ್ತು. ಇದು ಅವನ ಕಥೆ ಆದ್ರೆ ಎಲ್ಲಾ ಅವಳ ದೃಷ್ಟಿಕೋನದಲ್ಲಿ. ಅದ್ರಲ್ಲೂ ಅವ್ಳಿಗೆ ಗೊತ್ತಿಲ್ಲದ ಅದೆಷ್ಟೋ ಘಟನೆಗಳು. ಇದೆಲ್ಲಾ ಯಾವಾಗಾಯ್ತು ಅವ್ಳು ಯೋಚಿಸೋದ್ರಲ್ಲೆ, ಚಿತ್ರದ ಕ್ಲೈಮಾಕ್ಸ್. ಅದನ್ನ ನೋಡಿ ಅವ್ಳು ಕುಸಿದು ಬಿದ್ದಳು. ಚಿತ್ರವೇನೋ ಸೂಪರ್ ಡೂಪರ್ ಹಿಟ್. ಆದ್ರೆ ಆ ಚಿತ್ರ ಬಿಡುಗಡೆಯಾದ ಕ್ಷಣವೇ ಅವನ ಕೊನೆ ಕ್ಷಣವಾಗಿತ್ತು. ಚಿತ್ರದ ಕ್ಲೈಮಾಕ್ಸ್ ಅವ್ಳ ಜೀವನ ಯಾನದ ಅಂತಿಮ ಘಟ್ಟ.


ನವೀ...

Saturday, November 29, 2014

ಶಿಕ್ಷಣವೂ ವ್ಯಾಪಾರವಾದಾಗ...

ಶಿಕ್ಷಣವೂ ವ್ಯಾಪಾರವಾದಾಗ...

ಅದೊಂದು ಕಾಲವಿತ್ತು. ಶಿಕ್ಷಣವಷ್ಟೇ ವ್ಯಕ್ತಿಯನ್ನ ರೂಪಿಸುತ್ತದೆ. ಮನುಷ್ಯನನ್ನಾಗಿ ಮಾಡ್ತದೆ ಅಂತ ಎಲ್ಲರೂ ನಂಬಿದ್ರು. ಬಹುತೇಕ ಹಾಗೇ ಆಗ್ತಾ ಇತ್ತು ಕೂಡ ಅನ್ಸುತ್ತೆ. ಆದ್ರೀಗ ನಾವು ಈ ಮಾತನ್ನ ಹೇಳೋ ಹಂಗೇ ಇಲ್ಲ. ಇಂದು ಜಗತ್ತು ಮುಷ್ಠಿ ಮಾಡಿದ್ರೆ, ಕೈಯ್ಯೊಳಗೆ ಹಿಡಿಯುವಷ್ಟು ಚಿಕ್ಕದಾಗಿದೆ. ಅದೇ ಮುಷ್ಠಿ ಬಿಚ್ಚಿದ್ರೆ, ಅಂಗೈಗೆ ಮೀರಿದ್ದು, ಯೋಚನೆಗೂ ಮೀರಿದ್ದು...

ಜಾಗತೀಕರಣದಿಂದ ಇಡೀ ಜಗತ್ತು ಒಂದು ಚಿಕ್ಕ ಮನೆ ಅನಿಸುಂತೇನೋ ಆಗಿದೆ. ಆದ್ರೆ ಮನುಷ್ಯನನ್ನ ಮನುಷ್ಯನನ್ನಾಗಿಸ್ತದೆ ಅಂದ್ಕಂಡಿದ್ದ ಶಿಕ್ಷಣ ಮಾತ್ರ ನುಂಗಲಾರದ ಬಿಸಿ ತುಪ್ಪ. ಮೊದಲೆಲ್ಲಾ ಮನುಷ್ಯನಿಗೆ ಬದುಕೋದನ್ನ ಕಲಿಸೋಕೆ ಅಂತ ಶಿಕ್ಷಣ ಕೊಡ್ತಿಸ್ತಾ ಇದ್ರು. ಆದ್ರೀಗ ಶಿಕ್ಷಣ ಕೂಡ ವ್ಯಾಪಾರ ಆಗಿದೆ. ಅದಕ್ಕಿಂತಲೂ ಹೆಚ್ಚಾಗಿ ಶಿಕ್ಷಣ ಅನ್ನೋದು ಈಗ ಬರೀ ಒಣ ಪ್ರತಿಷ್ಠೆಯ ವಿಷ್ಯ. ಲಕ್ಷಂತಾರ ರೂಪಾಯಿ ಸುರಿದು ಮಕ್ಕಳನ್ನ ಶಾಲೆಗೆ ಸೇರಿಸೋ ಅಪ್ಪ, ಅಮ್ಮಂದ್ರಿಗೆ ತಮ್ಮ ಮಗ/ಮಗಳು ಶಾಲೆಗೇ ಫಸ್ಟ್ ಬರ್ಬೇಕು, ಊರಿಗೆ, ಜಿಲ್ಲೆಗೆ, ರಾಜ್ಯಕ್ಕೇ ಫಸ್ಟ್ ಬರ್ಬೇಕು ಅನ್ನೋ ಆಸೆ. ಇದಕ್ಕಾಗಿ ಮಕ್ಕಳನ್ನ ಒಂದರ್ಥದಲ್ಲಿ ಪೀಡಿಸ್ತಾನೆ ಇರ್ತಾರೆ. ಅಪ್ಪಿ ತಪ್ಪಿ ತಮ್ಮ ಮಗ/ಮಗಳು 100ಕ್ಕೆ 99 ಅಂಕ ತಂದ್ರೋ ಕಥೆ ಮುಗಿದೇ ಹೋಯ್ತು. ಆಕಾಶಾನೇ ಕಳಚಿ ಬಿದ್ದೋರ್ ಥರ ಆಡ್ತಾರೆ. ಪಾಪ ಆ ಮಗುವಿನ ಪರಿಸ್ಥಿತಿ ಬಗ್ಗೆ ಕಿಂಚಿತ್ ಕೂಡ ಆಲೋಚನೆನೇ ಇಲ್ಲ. ತಮ್ಮ ಸ್ನೇಹಿತರಲ್ಲಿ ಮಕ್ಕಳ ಶಿಕ್ಷಣದ ಬಗ್ಗೆ ಕೇಳ್ದಾಗ ಹೇಗಪ್ಪ ಹೇಳೋದು ಅನ್ನೋದಷ್ಟೇ ಇವ್ರ ಟೆನ್ಷನ್. ನೈಟ್ ಕ್ಲಬ್​ಗಳಲ್ಲಿ, ಕಿಟ್ಟಿ ಪಾರ್ಟಿಗಳಲ್ಲಿ ತಮ್ಮ ಮಕ್ಕಳ 100 ಅಂಕದ ಬಗ್ಗೆ ಮಾತೋಡೋದೇ ಇವ್ರಿಗೆ ಪ್ರತಿಷ್ಠೆ. ಅದಕ್ಕಿಂತ್ಲೂ ಹೆಚ್ಚಾಗಿ ಮುಂದೆ ತಮ್ಮ ಮಕ್ಕಳು ಅದೇ ಆಗ್ಬೇಕು, ಇದೇ ಆಗ್ಬೇಕು ಅನ್ನೋ ಇವ್ರ ಒತ್ತಡ, ಆ ಎಳೇ ಕಂದಮ್ಮಗಳನ್ನ ಬೆಳೆಯೋಕೆ ಬಿಡದಂತೆ ಚಿವುಟಿ ಹಾಕ್ತದೆ. ಜೀವನವನ್ನ ಕಲಿಸಬೇಕಾಶ ಶಾಲೆ, ಪಾಠಗಳು ಜೀವನ ಅಂದ್ರೇನೇ ಜಿಗುಪ್ಸೆ ಹುಟ್ಟೋ ಹಾಗೇ ಮಾಡ್ತವೆ.

ಇನ್ನು ಶಿಕ್ಷಣ ಸಂಸ್ಥೆಗಳದ್ದು ಇನ್ನೊಂದು ಗೋಳು. ಕೋಟಿ ಕೋಟಿ ಹಣ ಹೂಡಿ ಶಾಲೆಗಳನ್ನ ತೆಗೀತಿರೋ ಇಂದಿನ ಶಿಕ್ಷಣ ಸಂಸ್ಥೆಗಳು, ಅದನ್ನ ಮತ್ತೆ ವಾಪಸ್ ಪಡೆಯೋದು ಹೇಗೆ. ಹೂಡಿಕೆಯ ದುಪ್ಪಟ್ಟು, ಮೂರು ಪಟ್ಟು, ಹತ್ತು ಪಟ್ಟು ಲಾಭಗಳಿಸೋದು ಹೇಗೆ ಅನ್ನೋ ಲೆಕ್ಕಾಚಾರದಲ್ಲೇ ಇರ್ತವೆ. ಇದಕ್ಕೆ ಪೂರಕವಾಗಿ ಅಬ್ಬಾ ಅದೆಷ್ಟು ಅಡ್ವರ್ಟೈಸ್​ಮೆಂಟ್​ಗಳು. ನಮ್ಮ ಶಾಲೆ ರಾಜ್ಯಕ್ಕೇ ನಂ.1. ನಮ್ದು ದೇಶಕ್ಕೇ ನಂ.1 ಅಂತ. ಸರಿಯಾಗಿ ಪತ್ತೆ ಹಚ್ಚೋಕ್ ಹೋದ್ರೆ, ಪಕ್ಕದ ಬೀದೀಲಿ ಇರೋರ್ಗೇ ಈ ಶಾಲೆಗಳ ಬಗ್ಗೆ ಗೊತ್ತಿರಲ್ಲ. ಆದ್ರೂ ನಾವೇ ನಂ.1 ಅಂತ ಹೇಳ್ಕೊಂಡು ಅಡ್ಡಾಡ್ತಾನೆ ಇರ್ತಾರೆ ಈ ಶಾಲೆಗಳ ಆಡಳಿತದವ್ರು. ಇನ್ನು ಈ ನಂ.1 ಪಟ್ಟದ ಬಗ್ಗೆ ಜನ್ರಲ್ಲಿ ನಂಬಿಕೆ ಹುಟ್ಟಿಸೋಕೆ, ಅವ್ರನ್ನ ತಮ್ಮತ್ತ ಸೆಳೆಯೋಕೆ ಇವ್ರಿಗೂ ಆದಷ್ಟು ಮಕ್ಕಳು ಹೆಚ್ಚಿನ ಅಂಕಗಳನ್ನ ತಗಂಡು ಪಾಸ್ ಆಗ್ಲೇ ಬೆಕು. ಇಲ್ದಿದ್ರೆ, ಮುಂದಿನ ವರ್ಷ ಆ ಶಾಲೆ ಖಾಲಿ ಖಾಲಿ. ಅದಕ್ಕೇ ಮಕ್ಕಳಿಗೆ ಹೀಗೇ ಓದ್ಬೇಕು. ಇಷ್ಟೇ ಅಂಕ ತರ್ಬೇಕು ಅನ್ನೋ ಅಪ್ಪಣೆ, ಕಟ್ಟಳೆಗಳು. ಅದಕ್ಕಿಂತ್ಲೂ ಆಘಾತಕಾರಿ ವಿಷ್ಯ ಅಂದ್ರೆ, ಇಷ್ಟು ಮಾರ್ಕ್ಸ್ ಬಂದು ನೀನು ಪಾಸಾದ್ರೆ ಮಾತ್ರ ಕೆಲಸಕ್ಕೆ ಬರೋ ಹುಡುಗ/ಹುಡುಗಿ. ಇಲ್ದಿದ್ರೆ ನೀನು ನಿರುಪಯುಕ್ತ ಅನ್ನೋ ಭಾವನೆನ ಮಕ್ಕಳ ಮನಸಲ್ಲಿ ಮೂಡಿಸ್ತಾರೆ.

ಇದಕ್ಕೆಲ್ಲಾ ಕಾರಣ ಇವತ್ತು ನಾವು ಏನೇ ಯೋಚಿಸಿದ್ರೂ ಅದನ್ನ ವ್ಯಾಪಾರಿ ದೃಷ್ಠಿಯಿಂದ ಆಲೋಚಿಸೋದು. ಅಪ್ಪ ಅಮ್ಮಂದಿರು ತಮ್ಮ ಹೂಡಿಕೆಗೆ ತಕ್ಕಂತೆ ಮಕ್ಕಳು ಇದೇ ಆಗ್ಬೇಕು. ಆಗಷ್ಟೇ ತಮ್ಮ ಹೂಡಿಕೆಯಿಂದ ಲಾಭ ಗಳಿಸಲು ಸಾಧ್ಯ ಅಂತ ನಂಬಿದ್ದಾರೆ. ಇನ್ನು ಶಿಕ್ಷಣ ಸಂಸ್ಥೆಗಳಂತೂ ಬಿಡಿ. ತಮ್ಮ ಬ್ರಾಂಡ್ ಅನ್ನ ಅಡ್ವರ್ಟೈಸ್ ಮಾಡಲು ಇವ್ರಿಗೆ ಹೊಳೆಯೋಷ್ಟು ಐಡಿಯಾಗಳು ಯಾರಿಗೂ ಹೊಳೆಯಲ್ಲ. ಇದೆಲ್ಲದರ ಒಟ್ಟಾರೆ ಪರಿಣಾಮವಾಗಿ ಜೀವನ ಕಂಡುಕೊಳ್ಳಬೇಕಿದ್ದ ಮಕ್ಕಳು ಒಂದು ಅರ್ಧಕ್ಕೆ ಗುಡ್ ಬೈ ಹೇಳಿದ್ರೆ, ಇನ್ನು ಕೆಲವರು ಯಂತ್ರಗಷ್ಟೇ ಆಗಿ ಪರಿವರ್ತಿತರಾಗ್ತಾ ಇದ್ದಾರೆ. ಈಗಲೂ ಎಚ್ಚೆತ್ತುಕೊಳ್ಳೋಕೆ ಅವಕಶಾವಿದೆ. ಶಿಕ್ಷಣವನ್ನ ವ್ಯಾಪಾರಿ ದೃಷ್ಠಿಯಿಂದ ನೋಡದೆ, ಯಂತ್ರಗಳನ್ನ ತಯಾರಿಸೋ ಕಾರ್ಖಾನೆಯನ್ನಾಗಿಸದೇ ನಿಜವಾಗಲೂ ಜೀವನವನ್ನ ಕಲಿಸೋಕೆ ಬಳಸಿಕೊಂದ್ರೆ, ಅದಕ್ಕೆ ತಕ್ಕಂತೆ ಪಠ್ಯ ಕ್ರಮ ಸಿದ್ಧಪಡಿಸದ್ರೆ, ಎಲ್ಲವೂ ಸರಿಹೋಗೋದು ಅಷ್ಟೇನೂ ಕಷ್ಟವಾಗಲಿಕ್ಕಿಲ್ಲ. ಶಾಲೆಯೆಂಬ ಕಾರ್ಖಾನೆ ಹೂದೋಟವಾಗಿ, ಅಲ್ಲಿರೋ ಮೊಗ್ಗುಗಳು ಅರಳುವ ಮುನ್ನವೇ ಬಾಡಿ ಹೋಗೋದನ್ನ ತಪ್ಪಿಸಬಹುದು.

ನವೀ...

Friday, November 28, 2014

ಕೆಲವ್ರಿಗೆ ವುಲನ್ ಟೋಪಿ... ಹಲವ್ರಿಗೆ ಮಕಮಲ್​ದು...

ಕೈಲಾಗದೋನು ಮೈ ಪರಚಿಕೊಂಡ ಅಂತ ಒಂದ್ ಗಾದೆ ಇದೆ. ಬಹಶಃ ಈ ವಿಷ್ಯಕ್ಕೂ ಈ ಗಾದೆಗೂ ಏನೂ ಸಂಬಂಧವಿಲ್ದೇ ಇರಬೋದು. ಆದ್ರೆ ಸಮೀಪದ ಸಂಬಂಧ ಅಂತೂ ಇದೆ. ಇಷ್ಟು ದಿನ ಕೇಂದ್ರದಲ್ಲಿ ಅಥವಾ ರಾಜ್ಯಗಳಲ್ಲೇ ಆಗ್ಲಿ ಅಧಿಕಾರದ ಚುಕ್ಕಾಣಿ ಹಿಡಿಯೋಕೆ ‘ಜನಪ್ರತಿನಿಧಿ'ಗಳು ಅಂತ ಅನಿಸಿಕೊಂಡವರು / ಅನಿಸಿಕೊಳ್ಳುವವರು ಜನರಿಗೆ ವುಲನ್ ಟೋಪಿ ಹಾಕ್ತಾ ಇದ್ರು. ಆದ್ರೆ ಅದ್ಯಾವ ಘಳಿಗೇಲಿ ‘ನಮ್ಮ' ಮೋದಿ ಸಾಹೇಬ್ರು ಅಖಾಡಕ್ಕೆ ಬಂದ್ರೋ, ನೋಡಿ ಖದರೇಽ ಬೇರಾಯ್ತು. ಮಕಮಲ್ ಟೋಪಿ ಹಾಕೋಕ್ ಶುರು ಮಾಡಿದ್ರು. ಜನ್ರಿಗೂ ವುಲನ್ ಟೋಪಿ ಹಾಕ್ಕಂಡೂ ಹಾಕ್ಕಂಡೂ ಬೇಜಾರಾಗಿತ್ತು. ಅವ್ರು ವುಲನ್​ನಿಂದ ಮಕಮಲ್​ಗೆ ಶಿಫ್ಟ್. ಇಲ್ಲಿ ನನಗೆ ಮೋದಿ ಅಂದ್ರೆ ದ್ವೇಷ ಏನೂ ಇಲ್ಲ. ಇಲ್ಲಿವರ್ಗೂ ಎಲ್ಲಾ ರಾಜಕಾರಣಿಗಳು ಮಾಡ್ತಾ ಇದ್ದಿದ್ನೇ ಇವ್ರೂ ಮಾಡಿದಾರೆ ಅಷ್ಟೇ. ಆದ್ರೆ ಸ್ವಲ್ಪ ಕಲರ್​ಫುಲ್​ ಆಗಿ ಮಾಡಿದಾರೆ. ಇದ್ರಲ್ಲಿ ತಮ್ಮ ಚಾಣಾಕ್ಷತೆ ಮೆರೆದಿದಾರೆ.

ಇಲ್ಲಿ ನಿಜವಾಗ್ಲೂ ಮಂಕೆಗಳಾಗಿದ್ದು ಮಾತ್ರ ಜನ್ರೇ. ಪದೇ ಪದೇ ರಾಜಕಾರಣಿಗಳ ಪೊಳ್ಳು ಭರವೆಸೆಗಳನ್ನ ಕೇಳ್ತಾ ಇರ್ತೀವಿ. ಅವು ಈಡೇರಲ್ಲ ಅನ್ನೋದು ನಮ್ಗೆ ಗೊತ್ತೂ ಇರತ್ತೆ. ಆದ್ರೂ ನಾವು ಈ ಭರವಸೆಗಳ ಬುನಾದಿ ಮೇಲೆಯೇ ಬದುಕೋಕೆ ಆಸೆ ಪಡ್ತೀವಿ. ಹಿಂದಿನವ್ರು ಕೊಟ್ಟ ಭರವಸೆಗಳೆಲ್ಲಾ ಈಡೇರಿದೋ ಅಷ್ಟ್ರಲ್ಲೇ ಇದೆ. ಆದ್ರೂ 2014ರ ಲೋಕಸಭೆ ಚುನಾವಣೆ ಟೈಮ್ನಲ್ಲಿ ಮೋದಿ ಅತೀ ಹೆಚ್ಚು ಹೇಳಿದ್ದು ಕಪ್ಪು ಹಣದ ಬಗ್ಗೆ. ವಿದೇಶದಲ್ಲಿರೋ ಕಪ್ಪು ಹಣನಾ ಅಧಿಕಾರಕ್ಕೆ ಬಂದ್ರೆ 100 ದಿನದಲ್ಲಿ ವಾಪಸ್ ತರ್ತೀನಿ ಅಂತ ಹೇಳಿದ್ರು. ಅಲ್ಲ... ಭರವಸೆ ಕೊಟ್ರು. ತಾಂತ್ರಿಕವಾಗಿ ಅದು ಸಾಧ್ಯ ಇಲ್ಲ ಅನ್ನೋದು ಮೋದಿ ಭಾಷಣ ಕೇಳಿದ ಮತ್ತು ಕೇಳದವರಿಗೂ ಗೊತ್ತಿರೋ ವಿಷ್ಯವೇ. ಆದ್ರೂ ‘ಅದನ್ನ ನಾವೆಲ್ಲಾ ನಂಬಿದ್ವಿ'.

ಈಗ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದು 100 ದಿನ ಕಳೆದಾಯ್ತು. ಆದ್ರೆ ಇನ್ನೂ ವಿದೇಶದಲ್ಲಿರೋ ಕಪ್ಪು ಹಣ ಮಾತ್ರ ಭಾರತಕ್ಕೆ ಬಂದಿಲ್ಲ. ಬಹುಶಃ ಇನ್ನೂ ಹಲವು ತಿಂಗಳು ಅಥವಾ ಹಲವು ವರ್ಷಗಳಾದ್ರೂ ಆ ಬ್ಲಾಕ್ ಮನಿ ವಾಪಸ್ ಬರುತ್ತೆ ಅನ್ನೋ ನಂಬಿಕೆನೂ ಇಲ್ಲ. ಆದ್ರೂ ಕೆಲವರು ಇನ್ನೂ ಅದೇ ಹಳೇ ಗುಂಗಿನಲ್ಲೇ ಇದ್ದಾರೆ. ತಡವಾದ್ರೂ ನಮ್ಮ ಮೋದಿ ಕಪ್ಪು ಹಣವನ್ನ ಭಾರತಕ್ಕೆ ತಂದೇ ತರ್ತಾರೆ ಅಂತ ನಂಬಿದ್ದಾರೆ. ಇನ್ನು ಕೆಲವರು ಇದು ಸಾಧ್ಯವೇ ಇಲ್ಲ ಅಂತಲೂ ವಾದ ಮಾಡ್ತಾ ಇದ್ದಾರೆ. ಯಾವ್ದು ಏನೇ ಆದ್ರೂ, ಮೋದಿ ಮಾತ್ರ ತಮ್ಮ ಅದೇ ಲಹರಿಯಲ್ಲಿ ಜೋರು ಭಾಷಣಗಳಲ್ಲಿ, ಹಲವು ರಾಜ್ಯಗಳ ವಿಧಾನಸಭೆ ಚುನಾವಣಾ ಪ್ರಚಾರಗಳಲ್ಲಿ ಬ್ಯುಸಿ... ಬ್ಯುಸಿ... ಬ್ಯುಸಿ...

ಅಂದ್ಹಾಗೆ... ನೋಡ ನೋಡ್ತಿದ್ದಂತೆ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ವರ್ಷ ಕಳೀಯೋಕೆ ಸ್ವಲ್ಪವೇ ಸಮಯ ಉಳಿದಿದೆ. ಇನ್ನು ಹಾಗೇ, ಬಯ್ಯುತ್ತಾ, ಅವ್ರನ್ನ ಇವ್ರು, ಇವ್ರನ್ನ ಅವ್ರು ಟೀಕಿಸ್ತಾ ಅದ್ಹೇಗೋ ಕಣ್ಮುಚ್ಚಿ ತೆಗಿಯೋದ್ರೊಳಗೆ 5 ವರ್ಷನೂ ಪೂರ್ಣಗೊಳಿಸೇ ಬಿಡ್ತಾರೆ. ಆದ್ರೆ ಚುನಾವಣೆಯ ಪ್ರಚಾರದ ವೇಳೆ ನೀಡಿದ ಅದಷ್ಟೋ ಭರವಸೆಗಳು ಇನ್ನೂ ಹಾಗೇ ಇರ್ತವೆ. ಆಗ ಮತ್ತೆ ಇವ್ರುಗಳೇ ನಮ್ಮ ಮುಂದೆ ಪ್ರತ್ಯಕ್ಷರಾಗ್ತಾರೆ. ಆಗ ನಮ್ಮ ಮತ್ತೆ ಮೋದಿ ಆಥವಾ ಮೋದಿಯಂಥವರು, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಇನ್ನು ಹಲವು ಘಟಾನುಘಟಿ ನಾಯಕರು ಮತ್ತೆ ಪ್ರತ್ಯಕ್ಷವಾಗ್ತಾರೆ. ಅದೇ ಭರವಸೆಗಳು, ಆಶ್ವಾಸನೆಗಳು, ಕೆಲವರು ವುಲನ್ ಟೋಪಿ, ಹಲವರು ಮಕಮಲ್ ಟೋಪಿ. ಬದಲಾವಣೆಯನ್ನು ಬಯಸುವ ನಮ್ಮ ಬುದ್ಧಿವಂತ ಮತದಾರ ತಾನು ಮಾತ್ರ ಬದಲಾಗದೇ ಮತ್ತೆ ಮತ್ತೆ ತನ್ನ ತಲೆ ಹೊಸ ಟೋಪಿಗಾಗಿ ಸಿದ್ಧಪಡಿಸ್ಕಂಡೇ ಇರ್ತಾನೆ...


ನವೀ...

Tuesday, April 8, 2014

ಇವಳು ಅಮ್ನಾ ಭಟ್ಟಿ, ಪಾಕಿಸ್ತಾನದವಳು..

  My Article published in Avadi on April-4, 2014

ಇವಳು ಅಮ್ನಾ ಭಟ್ಟಿ, ಪಾಕಿಸ್ತಾನದವಳು..

April 4, 2014
by user2

ನವೀನ್ ಕುಮಾರ್ ಕೆ

ಜೀತ ಪದ್ದತಿಯ ಬಗ್ಗೆ ಎಷ್ಟೆಲ್ಲಾ ಹೋರಾಟಗಳು, ಎಷ್ಟೆಲ್ಲಾ ಪ್ರಯತ್ನಗಳ ನಂತರ ಅದಕ್ಕೆ ಜಾಗತಿಕವಾಗಿ ಮುಕ್ತಿ ಸಿಕ್ಕಿತ್ತು. ಆದರೆ ನಿಜವಾಗಿಯೂ ಜೀತ ಪದ್ದತಿ ಇಂದು ನಮ್ಮಲ್ಲಿ ಇಲ್ಲವೆ? ಜನರು ನಿಜವಾಗಿಯೂ ಇದರ ಕೂಪದಿಂದ ಹೊರ ಬಂದಿದ್ದಾರೆಯೇ? ಬಂದಿಲ್ಲ ಅಂದರೆ ಜೀತ ಪದ್ದತಿ ಈಗ ಯಾವ ರೂಪದಲ್ಲಿ ಇದೆ? ಹೀಗೆ ಹಲವು ಪ್ರಶ್ನೆಗಳು ಹುಟ್ಟಿಕೊಳ್ಳುತ್ತಾ ಹೋಗುತ್ತದೆ. ಅದರಲ್ಲೂ ಜೀತ ಅನ್ನೋದು ಹಿಂದುಳಿದ ದೇಶಗಳಲ್ಲಂತೂ ಕಂಡೂ ಕಾಣದಂತೆ ಹೆಮ್ಮರವಾಗಿ ಬೆಳೆದು ನಿಂತಿದೆ. ಅಥವಾ ಇದರ ಬಗ್ಗೆ ಗೊತ್ತಿದ್ದರೂ, ಅಲ್ಲಿನ ಕಾನೂನು, ಆಡಳಿತ ಇದನ್ನು ನಿರ್ಲಕ್ಷಿಸಿವೆ.  ಇದು ಇಂದು ನಮ್ಮ ಮುಂದಿರುವ ಕಠೋರ ಸತ್ಯ.
ಇದಕ್ಕೆ ಉತ್ತಮ ಉದಾಹರಣೆ ನಮ್ಮ ನೆರೆಯ ದೇಶ ಪಾಕಿಸ್ತಾನ. ಪಾಕಿಸ್ತಾನ ಎಂದ ಕೂಡಲೇ ನಾವು ಮೈ ಮೇಲೆ ಹಾವು ಹರಿದಂತೆ ಆಡುತ್ತೇವೆ. ಆದರೆ ಅಲ್ಲಿರುವವರು ಮನುಷ್ಯರೇ. ಅವರಿಗೂ ಮನಸ್ಸಿದೆ, ಕಷ್ಟ ಸುಖಗಳಿವೆ ಎಂಬುದನ್ನು ಆಲೋಚಿಸುವುದೇ ಇಲ್ಲ. ಸರಿ, ಯಾವುದೋ ರಾಜಕೀಯ ಕಾರಣಕ್ಕೆ ಅಥವಾ ರಕ್ಷಣೆಯ ಕಾರಣಕ್ಕೆ ನಾವು ನಮ್ಮ ನೆರೆಯ ದೇಶಗಳನ್ನು ಎಚ್ಚರಿಕೆಯಿಂದ ಗಮನಿಸುವುದು ಉತ್ತಮವೇ. ಆದರೆ ಬರೀ ದ್ವೇಷವನ್ನೇ ತುಂಬಿಕೊಳ್ಳುವುದು ಎಷ್ಟು ಸೂಕ್ತ? ಇದು ಕೇವಲ ನನಗೋ, ನಿಮಗೋ ಅಥವಾ ಭಾರತೀಯರಿಗಷ್ಟೇ ಸಂಬಂಧಿಸಿದ್ದಲ್ಲ. ಎರಡೂ ದೇಶಕ್ಕೆ ಸಂಬಂಧಿಸಿದ್ದು. ಇನ್ನು ನಾನು ಇಲ್ಲಿ ಹೇಳ ಹೊರಟಿರುವ ಜೀಪ ಪದ್ದತಿ ಅಥವಾ ಗುಲಾಮ ಪದ್ದತಿ ಈಡೀ ಜಗತ್ತಿಗೇ ಸಂಬಂಧಿಸಿದ್ದು.
ಪಾಕಿಸ್ತಾನದಲ್ಲಿ ಸಾವಿರಾರು ಜನ ಇಂದಿಗೂ ಈ ಗುಲಾಮ ಪದ್ದತಿಯಿಂದ ಮುಕ್ತಿ ಪಡೆದಿಲ್ಲ. ಅದರಲ್ಲೂ ಈ ಬಾಲಿಶತನಕ್ಕೆ ಬಲಿಯಾಗುತ್ತಿರುವುದು ಮಹಿಳೆಯರು ಎಂಬುದು ದು:ಖಕರ ಸಂಗತಿ. ಆದರೆ ಇಲ್ಲಿ ಜೀತ ಪದ್ದತಿ ಅಥವಾ ಗುಲಾಮಗಿರಿ ಅನ್ನೋದು ನೇರವಾಗಿ ನಡೆಯೋದಿಲ್ಲ. ಅದು ತನ್ನ ಚಹರೆಯನ್ನು ಬದಲಿಸಿಕೊಂಡಿದೆ. ಇಲ್ಲಿನ ಇಟ್ಟಿಗೆ ಫ್ಯಾಕ್ಟರಿ, ಕಾರ್ಪೆಟ್ ತಯಾರಿಕಾ ಕಂಪನಿಗಳು ಮತ್ತು ಕೃಷಿಯಲ್ಲಿ ಇಂದಿಗೂ ಜೀತದಾಳುಗಳಾಗಿ ದುಡಿಯುತ್ತಿದ್ದಾರೆ. ಅವರ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ಯಾವ ಸಕರ್ಾರವೂ, ಯಾವ ಕಾನೂನೂ ಕಿವಗೆ ಹಾಕಿಕೊಂಡಿಲ್ಲ. ಇನ್ನು ಇದನ್ನೆಲ್ಲಾ ಗಮನಿಸಿ ಸೂಕ್ತ ಕ್ರಮ ಕೈಗೊಳ್ಳುವುದಂತೂ ದೂರದ ಮಾತು.
ಇವರೆಲ್ಲಾ ಈ ಪಡಂಭೂತಕ್ಕೆ ಬಲಿಯಾಗುತ್ತಿರೋದು, ಬಂಧಿತ ಕಾರ್ಮಿಕರಾಗಿ. ಗುಲಾಮಗಿರಿ ತನ್ನ ಮುಖವಾಡವನ್ನು ಬಾಂಡೆಡ್ ಲೇಬರ್ ರೂಪದಲ್ಲಿ ಬದಲಿಸಿಕೊಂಡು ಇವರ ಮೇಲೆ ಇಂದಿಗೂ ಹೇರಲ್ಪಟ್ಟಿದೆ. ಕುಟುಂಬದ ಯಜಮಾನರ್ಯಾರೋ ಮಾಡುವ ಸಾಲವನ್ನು ತೀರಿಸೋದಕ್ಕಾಗಿ ಇವರು ತಮ್ಮ ಜೀವನ ಪೂರ್ತಿ ಅವರ ಒಡೆಯರ ಕಣ್ಗಾವಲಲ್ಲೇ ಕಳೆಯಬೇಕು. ಗಂಡ ಯಾವುದೋ ಕಾರಣಕ್ಕೆ ಸಾಲ ಮಾಡಿಕೊಂಡು, ಅಚಾನಕ್ಕಾಗಿ ಮೃತಪಟ್ಟರೆ, ಆತನ ಹೆಂಡತಿ ಜೀವನ ಪೂರ್ತಿ ಸಾಲ ಕೊಟ್ಟವನ ಅಡಿಯಾಳು. ಇದು ಇಲ್ಲಿಗೇ ಮುಗಿಯುವುದಿಲ್ಲ. ಆಕೆಯ ನಂತರ ಮತ್ತೆ, ಆಕೆಯ ಮಕ್ಕಳು, ಅವರ ಹೆಂಡಿರು ಹೀಗೇ ಕೊಂಡಿ ಬೆಳೆಯುತ್ತಾ ಸಾಗುತ್ತದೆ. ಆದರಲ್ಲೂ ಈ ಜೀತಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿರುವುದು ಮಹಿಳೆಯರು.
ಆಮ್ನಾ ಭಟ್ಟಿ ಅನ್ನೋ ಮಹಿಳೆ ತನ್ನ ಅರ್ಧ ಆಯುಷ್ಯವನ್ನು ಜೀತ ಮಾಡುವುದರಲ್ಲೇ ಕಳೆದು ಬಿಟ್ಟಿದ್ದಾಳೆ. 60 ವರ್ಷದ ಆಮ್ನಾ ಮೊಟ್ಟ ಮೊದಲು ಬಂಧಿತ ಕಾರ್ಮಿಕಳಾಗಿ ಇಟ್ಟಿಗೆಯ ಭಟ್ಟಿಗೆ ಬಂದಾಗ ಆಕೆಯ ವಯಸ್ಸು, ಬರೀ 10 ವರ್ಷ. ಅಂದು ತನ್ನ ತಂದೆ ಮಾಡಿದ್ದ ಸಾಲವನ್ನು ತೀರಿಸೋದಕ್ಕಾಗಿ ಇಲ್ಲಿ ಕೆಲಸಕ್ಕೆ ಸೇರಿದಾಕೆ, ಇಂದಿಗೂ ದುಡಿಯುತ್ತಲೇ ಇದ್ದಾಳೆ. ತಂದೆಯ ನಂತರ ಗಂಡ ಮಾಡಿದ ಸಾಲವನ್ನು ತೀರಿಸೋದು, ಅದೂ ಆದ ಮೇಲೆ ತಾನೇ ಮಾಡಿಕೊಂಡ ಸಾಲವನ್ನು ತೀರಿಸೋದು, ಹೀಗೆ ಒಂದಿಲ್ಲೊಂದು ಕೋಲಕ್ಕೆ ಕೈ ಒಡ್ಡುತ್ತಾ ತನ್ನ ಜೀವನವನ್ನು ಜೀತದಾಳಾಗಿ ಈಕೆ ಕಳೆದುಬಿಟ್ಟಿದ್ದಾಳೆ. ತನ್ನ ಮೇಲಿದ್ದ ಎರಡೂ ವರೆ ಲಕ್ಷ ಸಾಲವನ್ನು ತೀರಿಸಲು ಕೆಲಸಕ್ಕೆ ಬಂದಳು, ಇಲ್ಲಿಯವರೆಗೂ ಆಕೆ ತೀರಿಸಿರೋದು ಬರೀ ಒಂದು ಲಕ್ಷ ಮಾತ್ರ. ದಿನವೆಲ್ಲಾ ಕಷ್ಟ ಪಟ್ಟು ದುಡಿದರೆ ಇವರ ಕಷ್ಟದ ಪ್ರತಿಫಲ 350 ರೂಪಾಯಿ ಮಾತ್ರ. ಇದರಲ್ಲೇ ಸಾಲವನ್ನು ತೀರಿಸಿ, ಕುಟುಂಬ ನಿರ್ವಹಣೆಯನ್ನು ಮಾಡಬೇಕಾದ ಅನಿವಾರ್ಯತೆ ಇವರದು. ಹಾಗಾಗಿ ಇರುವ ಸಾಲವನ್ನು ತೀರಿಸೋದು ದೂರದ ಮಾತು ಬದುಕಲು ಮತ್ತೆ ಹೊಸ ಸಾಲವನ್ನು ಮಾಡಲೇಬೇಕಾದ ಪರಿಸ್ಥಿತಿ. ಬೇರೆ ದಾರಿ ಇಲ್ಲದೆ ಸಾಲ ಮಾಡುತ್ತಾರೆ. ಅದನ್ನು ತೀರಿಸಲು ಸಾಧ್ಯವಾಗದೇ ಮತ್ತೆ ಅಲ್ಲೇ ಕೆಲಸ ಮಾಡುತ್ತಾರೆ. ಹಾಗಾಗಿ ಅವರು ಬದುಕಿರುವಷ್ಟು ಕಾಲವೂ ಒಡೆಯರ ದಬ್ಬಾಳಿಕೆಯಡಿ, ಅವರ ಕಾಲ ಕಸದಂತೆ ಬದುಕುವುದು ಇವರಿಗೆ ತಪ್ಪಿದ್ದಲ್ಲ. ಇನ್ನು ಇಲ್ಲಿಂದ ತಪ್ಪಿಸಿಕೊಂಡು ಹೋಗಲೂ ಇವರಿಗೆ ಸಾಧ್ಯವಿಲ್ಲ. ಸದಾ ಇವರ ಮೇಲೆ ನಿಗಾ ಇಡಲಾಗಿರುತ್ತದೆ. ನಾವು ಬಡವರಾಗಿ ಹುಟ್ಟಿದ್ದೇವೆ, ಸಾಯುವವರೆಗೂ ಬಡವರಾಗೇ ಇರುತ್ತೇವೆ, ನಮ್ಮ ಹಣೆ ಬರಹ ಬದಲಾಗುವುದಿಲ್ಲ ಅನ್ನೋದು ಆಮ್ನಾ ಭಟ್ಟಿಯವರ ದು:ಖದ ನುಡಿಗಳು.
ಇನ್ನು ಈ ಜೀತ ಪದ್ದತಿಗೆ ದಾರಿ ಮಾಡಿಕೊಡುತ್ತಿರುವ ಮತ್ತೊಂದು ಕಾರಣವೆಂದರೆ ಹ್ಯೂಮನ್ ಟ್ರಾಫಿಕಿಂಗ್. ಹೌದು ಮಾನವ ಸಾಗಣೆಯೂ ಇಂದು ತನ್ನ ಬೇರುಗಳನ್ನು ತುಂಬಾ ಆಳವಾಗಿ ಚಾಚಿಕೊಂಡಿದೆ. ಈ ಕರಾಳ ದಂಧೆಯನ್ನು ಕಾನೂನು ನಿಷೇಧಿಸಿದ್ದರೂ, ಅದು ತನ್ನ ಸ್ವರೂಪವನ್ನು ಬದಲಿಸಿಕೊಂಡು ಇಂದಿಗೂ ಮುಂದುವರೆಯುತ್ತಿದೆ. ಬಹುತೇಕರು ಒಳ್ಳೆಯ ಉದ್ಯೋಗ ಪಡೆಯುವ ಉದ್ದೇಶದಿಂದ ಸಾಲ ಪಡೆದು ಹಣ ಕಟ್ಟುತ್ತಾರೆ. ಆದರೆ ಮಧ್ಯವರ್ತಿಗಳು ಇವರಿಗೆ ಉದ್ಯೋಗ ಆಸೆ ತೋರಿಸಿ, ಇವರನ್ನು ಮಾರಾಟ ಮಾಡುತ್ತಾರೆ. ಇನ್ನು ಉತ್ತಮ ನೌಕರಿಯ ಕನಸು ಹೊತ್ತು ವಿದೇಶಕ್ಕೆ ಹಾರುವ ಈ ಅಮಾಯಕರು, ಅತ್ತ ಕೆಲಸವೂ ಇಲ್ಲದೆ, ಮಾಡಿದ ಸಾಲವನ್ನು ತೀರಿಸಲೂ ಆಗದೇ, ಕೊನೆಗೆ ಜೀವನ ಪೂರ್ತಿ ಗುಲಾಮರಾಗಿ ಬಾಳುವ ಅನಿವಾರ್ಯತೆ ಸೃಷ್ಠಿಯಾಗುತ್ತದೆ. ಹೀಗೆ ಗುಲಾಮರಾಗಿಸಿಕೊಂಡವರನ್ನು, ಆಫ್ರಿಕಾ, ಕೆರಬಿಯನ್ ದೇಶಗಳು ಮತ್ತು ದಕ್ಷಿಣ-ಪೂರ್ವ ಏಷಿಯಾಗಳಲ್ಲಿ ಜೀತದಾಳುಗಳನ್ನಾಗಿ ಮಾಡಿಕೊಂಡು ದುಡಿಸಿಕೊಳ್ಳುತ್ತಾರೆ. ಇವರುಗಳು ಇಲ್ಲಿಂದ ತಪ್ಪಿಸಿಕೊಂಡು ಬರೋದಂತೂ ದುಸ್ಸಾಧ್ಯವೇ ಸರಿ. ಇವೆಲ್ಲದರ ಜೊತೆಜೊತೆಗೆ ದಕ್ಷಿಣ-ಪೂರ್ವ ಏಷಿಯಾದಲ್ಲಿ ಇಂದಿಗೂ ಜಾರಿಯಲ್ಲಿರುವ ಅನಿಷ್ಟ ಜಾತಿ ಪದ್ದತಿಯೂ ಸಹ ದಲಿತ ವರ್ಗದವರನ್ನು ಮೇಲ್ಜಾತಿ ಮತ್ತು ವರ್ಗದವರು ಅಡಿಯಾಳುಗಳಾಗಿಸಿಕೊಳ್ಳಲು ಸಹಕರಿಸುತ್ತಿದೆ. ಇನ್ನು ಭಾರತಕ್ಕೆ ಬರೋದಾದರೆ, ಇಂದಿಗೂ ಪಂಜಾಬಿನ ಅನೇಕ ಕಡೆಗಳಲ್ಲಿ ಈ ಬಾಂಡೆಡ್ ಲೇಬರ್ ಪದ್ದತಿ ಜಾರಿಯಲ್ಲಿರುವುದನ್ನು ನಾವು ಗಮನಿಸಬಹುದು. ಇಲ್ಲಿ ಗಂಡಸು, ಹೆಂಗಸು ಮಕ್ಕಳು ಎಂಬ ಬೇಧ, ಭಾವಗಳಿಲ್ಲದೆ, ಸಾವಿರಾರು ಮಂದಿ ಜೀತದಾಳುಗಳಾಗಿ ನಿತ್ಯವೂ ಕ್ವಾರಿಗಳಲ್ಲಿ, ಇಟ್ಟಿಗೆ ಭಟ್ಟಿಗಳಲ್ಲಿ ಮಾಲಿಕ ದೌರ್ಜನ್ಯದ ನಡುವೆಯೇ ರಕ್ತವನ್ನು ಬೆವರಿನಂತೆ ಬಸಿದು ದುಡಿಯುತ್ತಿದ್ದಾರೆ. ಆದರೂ ಇವರ ಸಾಲ ತೀರಿಲ್ಲ.
ಇವರ ಕಷ್ಟಗಳು ಕೊನೆಗೊಂಡಿಲ್ಲ. ಹೀಗೆ ನಿರಂತರವಾಗಿ ಮಹಿಳೆಯರ ಮೇಲೆ, ಮಕ್ಕಳ ಮೇಲೆ ಮತ್ತು ಶೋಷಿತ/ದಮನಿತ ವರ್ಗದ ಮೇಲೆ ದೌರ್ಜನ್ಯ, ದಬ್ಬಾಳಿಕೆಗಳು, ಶೋಷಣೆಗಳು ನಡೆಯುತ್ತಲ್ಲೇ ಇದೆ. ಇದು ಕೇವಲ ಪಾಕಿಸ್ತಾನ, ಭಾರತದ ಸಮಸ್ಯೆಯಲ್ಲ. ಆಧುನಿಕತೆಯ ಭರಾಟೆಯಲ್ಲಿ ಎಲ್ಲವೂ ತಮ್ಮ ಸ್ವರೂಪಗಳನ್ನು ಬದಲಿಸಕೊಂಡಿವೆ. ಹಾಗೆಯೇ ಈ ಜೀತ/ಗುಲಾಮ ಪದ್ದತಿಯೂ ಕೂಡ. ಇಂದು ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಅಂದಾಜಿಸುವ ಪ್ರಕಾರ ಕೇವಲ ಏಷಿಯಾ-ಪೆಸಿಫಿಕ್ ಪ್ರಾಂತ್ಯದಲ್ಲೇ ಸುಮಾರು 11.7 ಮಿಲಿಯನ್ ಜನರು ಈ ಬಾಂಡೆಡ್ ಲೇಬರ್ಗೆ ಬಲಿಪಶುವಾಗಿದ್ದಾರೆ. ಆದರೂ ಯಾವ ದೇಶದ ಕಾನೂನು, ಆಡಳಿತವೂ ಇದರ ವಿರುದ್ಧ ಕ್ರಮ ಕೈಗೊಂಡಿಲ್ಲ. ಇನ್ನಾದರೂ ನಾವುಗಳು ಎಚ್ಚೆತ್ತುಕೊಂಡು ಇದನ್ನು ಸೂಕ್ಷ್ಮವಾಗಿ ಗಮನಿಸುವ ಅವಶ್ಯಕತೆ ಇದೆ. ಇದರ ವಿರುದ್ಧ ಸಿಡಿದೇಳದಿದ್ದರೆ, ಇಂದು ಯಾರನ್ನೋ ಕಂಡು ಮರುಕ ಪಡುತ್ತಿರುವ ನಮ್ಮನ್ನು ನೋಡಿ ಮುಂದೊಂದು ದಿನ ಬೇರೆಯವರು ಕನಿಕರ ಪಡುವಂಥ ಸ್ಥಿತಿ ಎದುರಾದೀತು.

ಚಿತ್ರ ಕೃಪೆ : ಮೊಹಮ್ಮದ್ ಮುಹೆಸಿನ್

Tuesday, January 14, 2014

ಸಾಯಿಸೋದಷ್ಟೇ ಅಲ್ಲ… ಹುಟ್ಟಿಸೋದೂ ಅಪರಾಧವೇ…!

ಅವಧಿಯಲ್ಲಿ 13-01-2014ರಂದು ಪ್ರಕಟಗೊಂಡ "ನನ್ನನ್ನು ಕಾಡಿದ ಸಿನಿಮಾ" ಬೋಲ್ ಕುರಿತ ನನ್ನ ಅನಿಸಿಕೆ...

 

ಸಾಯಿಸೋದಷ್ಟೇ ಅಲ್ಲ… ಹುಟ್ಟಿಸೋದೂ ಅಪರಾಧವೇ…!

ನವೀನ್ ಕುಮಾರ್ ಕೆ

ನಾಯಕಿಯ ಕ್ಷಮಾದಾನವನ್ನು ರಾಷ್ಟ್ರಪತಿಗಳು ತಿರಸ್ಕರಿಸಿ ಆಕೆಗೆ ವಿಧಿಸಿರುವ ಗಲ್ಲುಶಿಕ್ಷೆ ಜಾರಿಗೊಳಿಸಲು ಆದೇಶಿಸುವುದರೊಂದಿಗೆ ಶುರುವಾಗುವ ಸಿನಿಮಾ ಉರ್ದು ಭಾಷೆಯ ಬೋಲ್. ಪಕಿಸ್ತಾನದಲ್ಲಿ 24 ಜೂನ್ 2011, ರಂದು ಬಿಡುಗಡೆಗೊಂಡು ಬಕ್ಸ್ ಆಫೀಸ್ನ ಎಲ್ಲಾ ಹಳೆಯ ದಾಖಲೆಗಳನ್ನು ಮುರಿದು ಯಶಸ್ಸು ಪಡೆದ ಸಿನಿಮಾ ಇದು.
ಚಿತ್ರದ ನಾಯಕಿ ಜೈನಾಬ್ (ಹುಮೈಮಾ ಮಲ್ಲಿಕ್)ಳ ಕ್ಷಮಾದಾನ ಅರ್ಜಿ ವಜಾಗೊಂಡಾಗ ಆಕೆಯ ಕೊನೆ ಇಚ್ಛೆಯಾಗಿ ಮಾಧ್ಯಮಗಳ ಎದುರು ತನ್ನ ಜೀವನದ ಕಥೆಯನ್ನು ಹೇಳಲು ಅವಕಾಶ ಕಲ್ಪಿಸಿ ಎಂದು ಕೇಳಿಕೊಂಡಿರುತ್ತಾಳೆ. ಅದಕ್ಕೆ ರಾಷ್ಟ್ರಪತಿಗಳ ಅಂಕಿತ ಬಿದ್ದು ಜೈನಾಬ್ ತನ್ನ ಕಥೆಯನ್ನು ಹೇಳುವುದರೊಂದಿಗೆ ಈ ಚಿತ್ರ ಪ್ರಾರಂಭಗೊಳ್ಳುತ್ತದೆ. ಒಟ್ಟು ಏಳು ಜನ ಅಕ್ಕ-ತಂಗಿಯರು ಮತ್ತು ತಂದೆ ತಾಯಿಯ ಈ ಸಂಸಾರದ ಕಥೆ ಇನ್ನೊಂದು ಮಗುವಿನ ಜನನದೊಂದಿಗೆ ಇನ್ನಷ್ಟು ಕರುಣಾಜನಕವಾಗುತ್ತಾ ಹೋಗುತ್ತದೆ. ಲಕನೌದ ನವಾಬ್ ಮನೆತದವರಾದ ಹಕೀಮ್ ಸಾಬ್(ಮಂಜರ್ ಸೆಹಬಾಯ್)ನ ಅಜ್ಜ ಭಾರತ ಪಾಕಿಸ್ತಾನ ಇಬ್ಭಾಗವಾದಾಗ ಲಾಹೋರನಲ್ಲೇ ಉಳಿದುಬಿಡುತ್ತಾರೆ. ಅಲ್ಲೇ ತನ್ನದೊಂದು ಪಾರಂಪರಿಕ ಔಷಧಿಯ ಅಂಗಡಿ ಮತ್ತು ಮನೆಯನ್ನು ಮಾಡಿಕೊಂಡು ನೆಲೆಗೊಳ್ಳುತ್ತಾರೆ. ಇದೇ ವೃತ್ತಿಯನ್ನು ಮುಂದುವರೆಸುವ ಹಕೀಮ್ ಸಾಬ್ ತನ್ನ ಆಥರ್ಿಕ ಸ್ಥಿತಿ ಸುಧಾರಿಸಬೇಕಾದರೆ ತನಗೊಂದು ಗಂಡು ಮಗುಬೇಕು ಎಂದು ಪದೇ ಪದೇ ಪ್ರಯತ್ನ ಪಡುತ್ತಲೇ ಇರುತ್ತಾನೆ. ಆದರೆ ಪ್ರತಿ ಸಾರಿಯೂ ಹೆಣ್ಣು ಶಿಶುಗಳ ಜನನ. ಕೊನೆಗೆ ಎಂಟನೆ ಮಗು ಗಂಡು ಸಂತಾನವಾದಾಗ ಅವನ ಸಂತೋಷಕ್ಕೆ ಪಾರವೇ ಇಲ್ಲ.

ಆದರೆ ಕೆಲವೇ ಕ್ಷಣಗಳಲ್ಲಿ ಅದು ಗಂಡೂ ಅಲ್ಲದ ಹೆಣ್ಣೂ ಅಲ್ಲದ ಮೂರನೇ ಲಿಂಗ (ಹಿಜರಾ) ಎಂದು ತಿಳಿದಾಗ ಆಘಾತಕೊಳಗಾಗುತ್ತಾನೆ. ಅಷ್ಟೇ ಅಲ್ಲ ಸಮಾಜವನ್ನು ಎದುರಿಸುವುದು ಕಷ್ಟ ಎಂದು ಆ ಹಸುಳೆಯನ್ನು ಕೊಲ್ಲವುದಕ್ಕೂ ಮುಂದಾಗುತ್ತಾನೆ. ಆಗ ಆತನ ಹೆಂಡತಿ ಸುರಯ್ಯಾ (ಝಾಯಿಬ್ ರೆಹಮನ್) ಅವನನ್ನು ತಡೆಯುತ್ತಾಳೆ. ಪರಿಪರಿಯಾಗಿ ಬೇಡಿಕೊಂಡ ನಂತರ ಕೊನೆಗೂ ಅವನನ್ನು ನಲ್ಕು ಗೋಡೆಗಳ ಮಧ್ಯೆ ಕೂಡಿಹಾಕುವ ಷರತ್ತಿನೊಂದಿಗೆ ಒಪ್ಪಿಕೊಳ್ಳುತ್ತಾನೆ. ಆ ಮಗು ಸೈಫಿ (ಮೆಹರ್ ಸಾಗರ್/ಉಮರ್ ಕಶ್ಮೀರಿ) ಹೊರ ಪ್ರಪಂಚದ ಜ್ಞಾನವೇ ಇಲ್ಲದೇ ಮತ್ತು ತನ್ನನ್ನು ಕಂಡರೆ ಅಸಹ್ಯ ಪಟ್ಟುಕೊಳ್ಳುವ ತಂದೆ ಎಂದರೆ ಅಂಜಿಕೆಯೊಂದಿಗೇ ಬೆಳೆಯುತ್ತದೆ. ಅದಕ್ಕೆ ತನ್ನ ಕೋಣೆಯೇ ಪ್ರಪಂಚ, ಅಲ್ಲಿ ಬಿಡಿಸಲಾಗಿರುವ ಚಿತ್ರಗಳೇ ಅವನ ಒಡನಾಡಿಗಳು. ಅಪ್ಪನನ್ನು ಬಿಟ್ಟು ಕುಂಟುಂಬದ ಎಲ್ಲರೂ ಅವನನ್ನು ಪ್ರೀತಿಯಿಂದ ಕಾಣುತ್ತಾರೆ.
ಈ ಮಧ್ಯೆ ಜೈನಾಬ್ ಮದುವೆಯಾಗಿ ಗಂಡನ ಮನೆಗೆ ಹೋಗುತ್ತಾಳೆ. ಆದರೆ ಪತಿಯ ಕಿರುಕುಳ ತಾಳಲಾರದೆ ಕೆಲವೇ ತಿಂಗಳಲ್ಲಿ ಮತ್ತೆ ತಂದೆಯ ಮನೆ ಸೇರಬೇಕಾಗುತ್ತದೆ. ಆಕೆಯ ಬೆಳೆದು ನಿಂತಿರುವ ತಮ್ಮನಲ್ಲಿ ಹೆಣ್ಣಿನ ಲಕ್ಷಣಗಳು ಕಾಣಿಸಿಕೊಳ್ಳುವುದು, ಅವನು ಹೆಣ್ಣಿನಂತೆ ಬಟ್ಟೆ ತೊಡುವುದನ್ನು ನೋಡುವ ಜೈನಾಬ್ ಅವನ ಮೇಲೆ ರೇಗುತ್ತಾಳೆ. ಆಗ ಆಕೆಯ ಸಮಸ್ಯೆಗೆ ಮುಸ್ತಫಾ (ಆತಿಫ್ ಅಸ್ಲಂ) ಪರಿಹಾರ ಸೂಚಿಸುತ್ತಾನೆ. ಮುಂಚಿನಿಂದಲೂ ಜೈನಾಬ್ಳ ತಂಗಿ ಆಯೆಶಾ(ಮಹಿರಾ ಖಾನ್)ಳನ್ನು ಪ್ರೀತಿಸುವ ಮುಸ್ತಫಾ, ಸೈಫಿಗೆ ಟ್ರಕ್ಗಳಿಗೆ ಪೈಂಟ್ ಮಾಡುವ ಕೆಲಸಕೊಡಿಸುತ್ತಾನೆ. ಆದರೆ ಸೈಫಿಯ ಲಿಂಗದ ಬಗ್ಗೆ ತಿಳಿದ ಅಲ್ಲಿನ ಅವನ ಸಹೋದ್ಯೋಗಿಗಳಿಂದ ಅವನಿಗೆ ಕಿರುಕುಳ ಶುರುವಾಗುತ್ತದೆ. ಒಂದು ದಿನ ಅವರೆಲ್ಲಾ ಸೇರಿ ಸೈಫಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗುತ್ತಾರೆ. ಇದನ್ನು ಸೈಫಿ ತನ್ನ ತಾಯಿ ಮತ್ತು ಅಕ್ಕನಿಗೆ ಹೇಳುವುದನ್ನು ಕೇಳಿಸಿಕೊಳ್ಳುವ ಅವನ ತಂದೆ ಎಲ್ಲರೂ ಮಲಗಿದ್ದ ವೇಳೆ ಅವನನ್ನು ಉಸಿರುಗಟ್ಟಿಸಿ ಕೊಂದುಬಿಡುತ್ತಾನೆ. ಈ ಕೊಲೆಯಿಂದ ಹೊರಬರಲು ಪೋಲಿಸರು ಎರಡು ಲಕ್ಷ ಲಂಚ ಕೇಳಿದಾಗ ಆ ಹಣವನ್ನು ಹೊಂದಿಸಲು ಅವನು ತನ್ನ ಮೇಲೇ ನಂಬಿಕೆ ಇಟ್ಟು ಕೊಟ್ಟಿದ್ದ ಮಸೀದಿಯ ಹಣವನ್ನು ಬಳಸಿಕೊಳ್ಳುತ್ತಾನೆ. ಜೊತೆಗೆ ತನ್ನ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಲು ವೇಶ್ಯಾವಾಟಿಕೆ ನಡೆಸುವವನ ಮಕ್ಕಳಿಗೆ ಖುರಾನ್ ಹೇಳಿಕೊಡುವ ಕೆಲಸಕ್ಕೆ ಒಪ್ಪಿಕೊಳ್ಳುತ್ತಾನೆ. ಈ ಮಧ್ಯೆ ಮಸೀದಿಯ ಹಣ ವಾಪಸು ಮಾಡುವ ಸಂದರ್ಭ ಎದುರಾದಾಗ ಆ ತಲೆಹಿಡುಕನನ್ನೇ ಅವನು ಸಾಲ ಕೇಳುವ ಪ್ರಸಂಗ ಎದುರಾಗುತ್ತದೆ. ಆದರೆ ಹೆಣ್ಣುಗಳಿಂದಲೇ ತನ್ನ ಜೀವನವನ್ನು ನಡೆಸುವ ಆವನು ತನ್ನ ದಂಧೆ ಸರಾಗವಾಗಿ ಇನ್ನು ಮುಂದು ಸಾಗಬೇಕಾದರೆ ಈಗಿರುವ ವೇಶ್ಯೆಗೆ ಒಂದು ಹೆಣ್ಣು ಮಗುವಾಗಬೇಕು, ಇದಕ್ಕೆ ನೀನು ಒಪ್ಪುವುದಾದರೆ ಆ ಹಣವನ್ನು ನಿನಗೆ ಕೊಡುತ್ತೇನೆ ಎಂದು ಷರತ್ತು ವಿಧಿಸುತ್ತಾನೆ. ಹೀಗೆ ವೇಶ್ಯೆಯ ಸಂಗ ಮಾಡಿ ಅನೈತಿಕ ಸಂಬಂಧ ಬೆಳೆಸಿಕೊಳ್ಳುವ ಹಕೀಂ ಸಾಬ್ನಿಂದ ಕೊನೆಗೂ ಅವಳಿಗೆ ಒಂದು ಹಣ್ಣು ಶಿಶುವಾಗುತ್ತದೆ.
ಆದರೆ ಆ ಮಗುವನ್ನು ಅಲ್ಲಿ ಬಿಟ್ಟು ಹೋಗಲು ಮನಸೊಪ್ಪದೆ ಅದನ್ನು ತನ್ನೊಡನೆ ಕಳಸಿಕೊಡು ಎಂದು ಆ ವೇಶ್ಯೆಯಲ್ಲಿ ಕೇಳಿಕೊಳ್ಳುವುದನ್ನು ತಿಳಿದು ಆ ಮಾಲೀಕ ಅವನನ್ನು ಅಲ್ಲಿಂದ ಹೊಡೆದಟ್ಟುತ್ತಾನೆ. ಕೊನೆಗೆ ಒಂದು ದಿನ ಆಕೆಯ ತನ್ನ ಮಗುವನ್ನು ಹಕೀಂ ಸಾಬ್ನ ಮನೆಗೆ ತಂದುಬಿಡುತ್ತಾಳೆ. ಆಗ ತನ್ನ ಗಂಡ/ತಂದೆಯ ಅನೈತಿಕ ಸಂಬಂಧದ ಬಗ್ಗೆ ತಿಳಿದುಕೊಳ್ಳುವ ಹೆಂಡತಿ ಮತ್ತು ಮಕ್ಕಳು ಅವನೊಡನೆ ವಾದ ಮಾಡಿಕೊಂಡು ಮಾರನೆ ದಿನ ಮನೆ ಬಿಟ್ಟು ಹೊರ ಹೋಗುವ ನಿಧರ್ಾರಕ್ಕೆ ಬರುತ್ತಾರೆ. ಆದರೆ ವೇಶ್ಯಾವಾಟಿಕೆ ನಡೆಸುವ ಮಾಲೀಕ ಇದ್ದಕ್ಕಿದಂತೆ ಅವರ ಮನೆ ಮೇಲೆ ದಾಳಿ ಮಾಡಿದಾಗ ಹಕೀಂ ಸಾಬ್ ಆ ಹಸುಳೆಯನ್ನೂ ಕೊಲ್ಲಲು ಹೋಗುತ್ತಾನೆ. ಇದನ್ನು ವಿರೋಧಿಸುವ ಜೈನಾಬ್ ಕೊನೆಗೆ ಬೇರೆ ದಾರಿ ಕಾಣದೆ ತನ್ನ ತಂದೆಯನ್ನು ಕೊಂದು ಆ ಮಗುವನ್ನು ತನ್ನ ತಂಗಿಯೊಡನೆ ಬೇರೆ ಕಡೆ ಕಳಿಸಿ ರಕ್ಷಿಸುತ್ತಾಳೆ. ಮನೆಯಲ್ಲಾ ಹುಡುಕಾಡಿದರೂ ಎಲ್ಲೂ ಮಗು ಕಾಣದಿದ್ದಾಗ ಖಾಲಿ ಕೈಲಿ ಆ ಮಾಲೀಕ ವಾಪಾಸಾಗುತ್ತಾನೆ. ಆದರೆ ತನ್ನ ತಂದೆಯನ್ನು ಕೊಂದ ಅಪರಾಧಕ್ಕೆ ಜೈನಾಬ್ಗೆ ಮರಣದಂಡನೆ ವಿಧಿಸಲಾಗುತ್ತದೆ.
ಇಲ್ಲಿ ನಿರ್ದೇಶಕ ಸೋಯೆಬ್ ಮನ್ಸೂರ್ ಹೆಣ್ಣು ಅನುಭವಿಸುವ ಸಮಸ್ಯೆಗಳ ಬಗ್ಗೆ ಹೇಳ ಹೊರಟಿರುವುದು ಗೊತ್ತಾದರೂ, ನಿರೂಪಣೆಯಲ್ಲಿ ಬಹಳಷ್ಟು ಗೊಂದಲಗಳಿವೆ. ಒಂದು ಸಮಸ್ಯೆಯನ್ನು ಹೇಳಲು ಹೋಗಿ ಇನ್ನೊಂದು ಸಮಸ್ಯೆಯನ್ನು ಅದರ ಮಧಯೆ ಇರುಕಿಸುತ್ತಾ ಹೋಗುತ್ತಾರೆ. ನಿರೂಪಣೆಯಲ್ಲಿ ಇನ್ನಷ್ಟು ಗಟ್ಟಿತನವಿದ್ದರೆ ಚಿತ್ರ ಇನ್ನೂ ಚೆನ್ನಾಗಿ ಮೂಡಿಬರುತ್ತಿತ್ತು ಎನಿಸುತ್ತದೆ.
ಚಿತ್ರದ ಕೊನೆಯಲ್ಲಿ ನಾಯಕಿ ಎಲ್ಲರಿಗೂ ಒಂದು ಪ್ರಶ್ನೆಯನ್ನು ಹಾಕುತ್ತಾಳೆ ಕೇವಲ ಸಾಯಿಸುವವರಿಗಷ್ಟೇ ಏಕೆ ಶಿಕ್ಷೆ ವಿಧಿಸಲಾಗುತ್ತದೆ. ಹುಟ್ಟಿಸುವವರಿಗೆ ಏಕಿಲ್ಲ ಅಂತ. ನಿಜಕ್ಕೂ ಮಕ್ಕಳನ್ನು ಹುಟ್ಟಿಸಿ ಅವರನ್ನು ಸಾಕಲಾಗದೇ ಅಥವಾ ಇನ್ನಾವುದೋ ಕಾರಣಕ್ಕೆ ಅವರಿಗೆ ನಿತ್ಯವೂ ನರಕದ ದರ್ಶನ ಮಾಡಿಸುವ ಕೆಲವು ಪೋಷಕರೂ ನಮ್ಮೊಡಿನಿದ್ದಾರೆ. ಅಂಥವರಿಗೂ ಶಿಕ್ಷೆ ಆಗಬೇಕು. ಒಂದು ಆಶಯವನ್ನಿಟ್ಟುಕೊಂಡು ಮಾಡಿದ ಈ ಸಿನಿಮಾ ನಿಜಕ್ಕೂ ಕೆಲವು ಲೋಪದೋಷಗಳನ್ನು ಹೊರತು ಪಡಿಸಿದರೆ ನಿಮ್ಮನ್ನು ಸರಾಗವಾಗಿ ನೋಡಿಸಿಕೊಂಡು ಹೋಗುತ್ತದೆ.

Thursday, December 5, 2013

ಜೀವನ ಒಂಟಿ ರೈಲು ನಿಲ್ದಾಣ

ಅವಧಿಯಲ್ಲಿ ಪ್ರಕಟಗೊಂಡ ನನ್ನ ಎರಡನೇ ಲೇಖನ... ನಿಮಗಾಗಿ


ಯಾಕೋ ರೈಲು ನಿಲ್ದಾಣ ನೋಡಿದಾಗ…

ಜೀವನ ಒಂಟಿ ರೈಲು ನಿಲ್ದಾಣ

ನವೀನ್ ಕುಮಾರ್ ಕೆ

ಮೊನ್ನೆ ಶನಿವಾರ ನನಗೆ ಪರೀಕ್ಷೆ ಇತ್ತು, ಬಳ್ಳಾರಿಯಲ್ಲಿ. ಸರಿ ಪರೀಕ್ಷೆ ಅಂದ ಮೇಲೆ ತಪ್ಪಿಸೋಕಾಗುತ್ತಾ? ಶುಕ್ರವಾರದಂದು ರಾತ್ರಿಯೇ ಬೆಂಗಳೂರಿನಿಂದ ಹೊರಟೆ. ರಾತ್ರಿ ಪೂರಾ ಬಸ್ಸಿನಲ್ಲಿ ನಿದ್ದೆ ಇಲ್ಲ. ಬೆಳಗಾದರೆ 9 ಗಂಟೆಗೆ ಪರೀಕ್ಷೆ ಬೇರೆ. ಹಾಗೂ ಹೀಗೂ ಬಸ್ಸು ಬಳ್ಳಾರಿ ತಲುಪಿದಾಗ ಬೆಳಗಿನ ಜಾವ 4.50ರ ಸಮಯ. ಬಸ್ಸಿಳಿದೊಡನೆ ನನ್ನನ್ನು ಪಿಕ್ ಮಾಡಲು ಬರುತ್ತೇನೆಂದು ಒಪ್ಪಿಕೊಂಡಿದ್ದ ಗೆಳೆಯನಿಗೆ ಫೋನ್ ಮಾಡಿದರೆ, ಮಹಾಶಯನಿಂದ ಉತ್ತರವೇ ಇಲ್ಲ. ಗಡದ್ದಾಗಿ ನಿದ್ದೆ ಮಾಡುತ್ತಿದ್ದನೆನಿಸುತ್ತೆ. ಐದಾರು ಬಾರಿ ಕರೆ ಮಾಡಿ ಕೊನೆಗೆ ಬೇಸತ್ತು ನಡೆದುಕೊಂಡೇ ಹೊರಟೆ.
ಸುಮಾರು ಹನ್ನೊಂದು ವರ್ಷಗಳ ಕಾಲ ಬಳ್ಳಾರಿಯಲ್ಲೇ ಇದ್ದರೂ ಬೆಳಗಿನ ಸಮಯದಲ್ಲಿ ಅದೂ 5 ಗಂಟೆಗೇ, ನಾನು ಹೊರಗೆ ಬಂದಿದ್ದು ತೀರಾ ವಿರಳ. ಇನ್ನೂ ಮಬ್ಬುಗತ್ತಲು ಹಾಗೆಯೇ ಇತ್ತು. ಆ ಕತ್ತಲಲ್ಲಿಯೇ ನಾನು ನಡೆದು ಸಾಗಿದಂತೆಲ್ಲಾ ಕಪ್ಪು ಟಾರಿನ ರಸ್ತೆಯನ್ನು ಹಿಮ್ಮೆಟ್ಟಿ ಸಾಗುತ್ತಿರುವ ಅನುಭವ ನನಗೆ ನಡೆದು ಹೋಗಲು ಸ್ಪೂರ್ತಿಯಾಗಿತ್ತು. ಹಾಗೇ ಮುಂದೆ ಬಳ್ಳಾರಿಯ ಗುಡ್ಡದ ಪಕ್ಕದಿಂದಲೇ ಹಾದು ಹೋಗುವ ರಸ್ತೆಯಲ್ಲಿ ಗಡ್ಡದ ಕಲ್ಲು ಬಂಡೆಗಳೂ, ಕರಿಯ ಹೊದಿಕೆ ಹೊದ್ದ ಆಕಾಶವೂ ಮಿಲನಗೊಂಡ ಭ್ರಾಂತಿ. ಈ ಮಿಲನವನ್ನು ತಡೆಯಲೇನೋ ಎಂಬಂತೆ, ಸೂರ್ಯ ಎಲ್ಲಿಂದ ಹೊರಬರಬೇಕೆಂದು ತವಕಿಸುತ್ತಾ ಇಣುಕಿ ನೋಡುತ್ತಿದ್ದಾನೇನೋ ಎಂದು ಭಾಸವಾಗುತ್ತಿತ್ತು. ರಾತ್ರಿಯೆಂದರೆ ಕರಾಳವಾಗೇ ಊಹಿಸಿಕೊಳ್ಳುತ್ತಿದ್ದ ನನಗೆ ಕತ್ತಲು ಕೂಡ ಇಷ್ಟು ರಮ್ಯವಾಗಿರುವುದು ಎಂದು ತಿಳಿದದ್ದೇ ಅಂದು. ಹಾಗೆಯೇ ಪ್ರಕೃತಿಯ ಸವಿ ಮತ್ತು ಮುಂಜಾವಿನ ತಣ್ಣನೆಯ ಗಾಳಿಯನ್ನು ಸವಿಯುತ್ತಾ ಭ್ರಮಾ ಲೋಕದಲ್ಲಿರುವಂತೆ ಮುಂದೆ ಸಾಗಿದವನಿಗೆ ಎಚ್ಚರವಾದದ್ದು ಸ್ನೇಹಿತನ ರೂಮು ಸಮೀಪಿಸಿದಾಗ.
ಹೋಗಿ ಬಾಗಿಲು ತಟ್ಟುತ್ತಿದ್ದಂತೆ ಗೆಳೆಯ ಬಾಗಿಲು ತೆರೆದವನೇ ಹೇಗಿದ್ದೀಯ ಬಾ ಒಳಗೆ… ಎಂದು ಸ್ವಲ್ಪ ರೆಸ್ಟ್ ತಗೋ ಅಂತ ಚಾಪೆ ತೋರಿಸಿದ. ಅಲ್ಲಿಯವರೆಗೂ ಎಲ್ಲಿತ್ತೋ ಗೊತ್ತಿಲ್ಲ, ನಲವತ್ತು ನಿಮಿಷದ ನಡಿಗೆಯ ಆಯಾಸ ಧುತ್ತೆಂದು ಹೊರಬಿತ್ತು, ಕಣ್ಣುಗಳು ಎಳೆಯ ತೊಡಗಿದವು. ಸರಿ ಸ್ವಲ್ಪ ಹೊತ್ತು ಮಲಗಿ ನಂತರ ಎದ್ದು ಫ್ರೆಷಪ್ ಆಗಿ ಪರೀಕ್ಷೆಗೂ ಒಂದಷ್ಟು ತಯಾರಿ ಮಾಡಿಕೊಂಡರಾಯ್ತು ಎಂದುಕೊಂಡು ಮಲಗಿದವನಿಗೆ ಎಚ್ಚರವಾಗಿದ್ದೆ ಎಂಟರ ಹೊತ್ತಿಗೆ. ಹರಿಬರಿಯಲ್ಲಿ ಎದ್ದವನೇ ಸ್ನಾನಾದಿಗಳನ್ನು ಮುಗಿಸಿ ನೇರ ಕಾಲೇಜ್ ಹತ್ತಿರವಿರುವ ಕ್ಯಾಂಟೀನ್ಗೆ ಹೋದವನೇ ಒಂದಷ್ಟು ಮಂಡಕ್ಕಿ ವಗ್ಗರಣೆ, ಮಿರ್ಚಿಯನ್ನು ಹೊಟ್ಟೆಯ ಚೀಲಕ್ಕೆ ತುಂಬಿಸಿಕೊಂಡು ಎಕ್ಸಾಮ್ ಹಾಲ್ಗೆ ಹೋದವನಿಗೆ ಪ್ರಶ್ನೆ ಪತ್ರಿಕೆ ನೋಡಿ ಅರ್ಧ ಜಂಘಾಬಲವೇ ಉಡುಗಿಹೋದಂತಾಗಿತ್ತು. ಮೊದಲೇ ಏನೂ ಓದಿರಲಿಲ್ಲ. ಇನ್ನು ಅದರಲ್ಲಿರುವ ಕೆಲವು ಪದಗಳು ಇದೇ ಮೊದಲಬಾರಿಗೆ ಓದಿದಂತೆ ಅನಿಸುತಿತ್ತು. ಆದರೂ ಹೇಗೋ ಒಂದಷ್ಟು ನೆನಪಿರುವುದನ್ನೆಲ್ಲಾ ಕಲೇಬಿದ್ದು ಮನಃ ಪಟಲದಲ್ಲಿ ಕೂಡಿಹಾಕಿಕೊಂಡು, ಅದನ್ನೇ ಉತ್ತರ ಪತ್ರಿಕೆಯಲ್ಲಿ ಬರೆದು, ಸಮಯ ಮುಗಿಯುತ್ತಿದ್ದಂತೆ ಬದುಕಿದೆಯಾ ಬಡಜೀವವೇ ಎಂದು ಹೊರಬಿದ್ದೆ.
ಮತ್ತೆ ಹೊಸಪೇಟೆಗೆ ಹೋಗಬೇಕಿದ್ದುದರಿಂದ ಸ್ನೇಹಿತನ ಮನೆಗೆ ಹೋಗಿ ಮಧ್ಯಾಹ್ನದ ಊಟ ಮುಗಿಸಿಕೊಂಡು ರೈಲ್ವೇ ಸ್ಟೇಷನ್ ಕಡೆ ಹೊರಟೆ. ನಿದ್ದೆಯ ಮಂಪರು ಇನ್ನೂ ಬಿಟ್ಟಿರಲಿಲ್ಲ. ತಲೆಯ ಮೇಲೆ ಮಟ ಮಟ ಮಧ್ಯಾಹ್ನದ ಬೆಂಕಿ ಚಂಡು ನೆತ್ತಿಯನ್ನು ಸುಡುತ್ತಿತ್ತು. ಸ್ಟೇಷನ್ ತಲುಪಿ ಟಿಕೇಟ್ ತೆಗೆಸಿಕೊಳ್ಳಲು ಹೋದರೆ ಅಲ್ಲೂ ರೈಲು ಬೋಗಿಗಳಷ್ಟು ಉದ್ದದ ಕ್ಯೂ. ಹದಿನೈದು ನಿಮಿಷಗಳ ಬೇಸರದ ಕಾಯುವಿಕೆಯ ನಂತರ ಟಿಕೇಟ್ ಪಡೆದು ಒಳ ಹೊಕ್ಕವನಿಗೆ, ಹಳೆಯ ಸಹ-ಕೆಲಸಗಾರನೊಬ್ಬ ಭೇಟಿಯಾದ. ಅವನು ತನ್ನ ಹೆಂಡತಿಯೊಂದಿಗೆ ಹುಬ್ಬಳ್ಳಿಗೆ ಹೊರಟಿದ್ದನಂತೆ. ಇತ್ತೀಚಿಗಷ್ಟೇ ಮದುವೆಯಾಗಿದ್ದ ಅವನ ಮುಖದಲ್ಲಿ ಇನ್ನೂ ಮದುಮಗನ ಕಳೆ ಎದ್ದು ಕಾಣುತಿತ್ತು. ಅವನ ಕುಶಲೋಪರಿ ವಿಚಾರಿಸಿ ಅವನ ನವಜೀವನಕ್ಕೆ ಶುಭ ಹಾರೈಸಿ ಮುಂದಕ್ಕೆ ಹೋದೆ. ಶನಿವಾರವಾದ ಕಾರಣ ನಿಲ್ದಾಣದ ತುಂಬಾ ಜನಜಂಗುಳಿ ಗಿಜಿಗುಡುತ್ತಿತ್ತು. ಚಿಕ್ಕ ಮಕ್ಕಳ ಅಳು, ಸತ್ತಲೂ ಇರುವವರ ಪರಿವೆಯೇ ಇಲ್ಲದಂತೆ ಜೋರಾಗಿ ಅವರಿವರ ಬಗ್ಗೆ ಮಾತನಾಡಿಕೊಳ್ಳುತ್ತಿರುವವರು, ಕೀಟಲೆ ಮಾಡುತ್ತಿರುವ ಮಕ್ಕಳನ್ನು ಗಡರಿಸುವವರು ಹೀಗೆ ನಾನಾ ರೀತಿಯ ಜನ ಅವರವರ ಲೋಕದಲ್ಲಿ ಮುಳುಗಿದ್ದರು.
ಆಗಲೇ ರೈಲು ಅರ್ಧಗಂಟೆ ತಡವಾಗಿ ಚಲಿಸುತ್ತಿದೆ ಎಂಬ ಉದ್ಘೋಷಕರ ಧ್ವನಿ ಕೇಳಿ ಎಲ್ಲರೂ ಈ ಲೋಕಕ್ಕೆ ಮರಳಿದವರಂತೆ, ಈ ರೈಲುಗಳ ಹಣೇಬರಹವೇ ಇಷ್ಟು. ಯಾವತ್ತಾದರೂ ಸಮಯಕ್ಕೆ ಸರಿಯಾಗಿ ಬಂದರೆ ಅದೇ ದೊಡ್ಡ ಸಾಹಸ ಎಂದು ಬೈದುಕೊಳ್ಳಲು ಶುರುವಿಟ್ಟರು. ಸರಿ ಇನ್ನೂ ಅರ್ಧಗಂಟೆ ಹೇಗೆ ಕಾಲ ಕಳೆಯುವುದು ಎಂದು ನನ್ನ ಬ್ಯಾಗ್ ತಡಕುತ್ತಿದ್ದವನಿಗೆ ಯಾವುದೋ ಮಾಸ ಪತ್ರಿಕೆಯೊಂದು ಸಿಕ್ಕಿತು. ಅದನ್ನೇ ಓದುತ್ತಾ ಕುಳಿತೆ. ಓದುತ್ತಿದ್ದವನಿಗೆ ಅದ್ಯಾವಾಗ ಅರ್ಧಗಂಟೆಯಾಯ್ತೋ ಗೊತ್ತಾಗಲಿಲ್ಲ. ಮತ್ತೆ ಇನ್ನು ಕೆಲವೇ ಕ್ಷಣಗಳಲ್ಲಿ ರೈಲು ನಿಲ್ದಾಣಕ್ಕೆ ಬರಲಿದೆ ಎಂಬ ಅನೌನ್ಸ್ಮೆಂಟ್ ಬಂದಾಗಲೇ ಎಚ್ಚರವಾಗಿದ್ದು. ಆಗ ಸುತ್ತಲೂ ನೋಡಿದೆ. ಎಲ್ಲರೂ ರೈಲಿನ ಬರುವಿಗಾಗಿ ಕಾಯುತ್ತಾ ಶತಪಥ ಹಾಕುತ್ತಿದ್ದರು. ಇನ್ನು ಕೆಲವರು ಸೀಟನ್ನು ಹಿಡಿಯಲು ಪ್ಲಾಟ್ಫರ್ಾಮ್ ಬಿಟ್ಟು ಆಚೆ ಬದಿಯಲ್ಲಿ ಹೋಗತೊಡಗಿದರು. ಆಗ ಗಮನ ಸೆಳೆದದ್ದು ಒಂದು ಪುಟ್ಟ ಹುಡುಗಿಯ ಧ್ವನಿ. ಅವಳು ಮಾಮಾ ಎಂದು ಕರೆಯುತ್ತಿದ್ದರೆ, ಯಾರಪ್ಪಾ ಅದು ಎಂದು ನೋಡಿದೆ. ಚಿಕ್ಕ ಮಗುವೊಂದು ಆಚೆ ಬದಿ ಹೋಗುತ್ತಿದ್ದ ತನ್ನ ಸೋದರಮಾವನನ್ನು ಕೂಗುತ್ತಿತ್ತು.
ಸುಮ್ಮನೆ ಆಟವಾಡಿಸಲು ಕೂಗುತ್ತಿದೆಯೇನೋ ಅನಿಸಿದರೂ, ಯಾಕೋ ಕುತೂಹಲ ಮೂಡಿ ಆ ಮಗುವನ್ನೇ ದಿಟ್ಟಿಸುತ್ತಿದ್ದೆ. ಮೂರ್ನಾಲ್ಕು ಸಲ ಕೂಗಿದ ನಂತರ ಆ ಹುಡುಗಿಯ ಮಾವ ಅವಳೆಡೆಗೆ ತಿರುಗಿದಾಗ, ಹಷಾರು ಮಾಮ, ತುಂಬಾ ಹತ್ತಿರ ಹೋಗಬೇಡ ಎಂದು ಎಚ್ಚರಿಕೆಯನ್ನು ನೀಡಿತು. ಆ ಎಳೆ ಹುಡುಗಿಗೆ ತನ್ನ ಮನೆಯವರ ಮೇಲೆ ಇರುವ ಪ್ರೇಮ, ಕಾಳಜಿ ನಿಜಕ್ಕೂ ನನ್ನನ್ನು ಮೂಕವಿಸ್ಮಿತನನ್ನಾಗಿಸಿತ್ತು. ಅಷ್ಟರಲ್ಲೇ ನಾವು ಹೊರಡಬೇಕಿರುವ ರೈಲು ನಿಲ್ದಾಣಕ್ಕೆ ಬಂದು ನಿಂತಿದ್ದರಿಂದ, ನಾನೂ ಸೀಟು ಹಿಡಿದುಕೊಳ್ಳಲು ತರಾತುರಿಯಲಿ ಒಳ ಹೊಕ್ಕು, ಅಂತೂ ಒಂದು ಕಿಟಕಿ ಬದಿಯ ಕುರ್ಚಿಯಲ್ಲಿ ಕುಳಿತುಕೊಂಡೆ. ಹಾಗೇ ಕಿಟಕಿಗೆ ತಲೆಯಾನಿಸಿ ಹೊರ ನೋಡುತ್ತಿದ್ದವನಿಗೆ ಅಷ್ಟೊತ್ತು ಇದ್ದ ಜನರ ಕಲರವ, ಆ ಗಡಿಬಿಡಿ ಕಡಿಮೆಯಾಗುತ್ತಿರುವುದು ಕಾಣಿಸಿತು. ಹಾಗೇ ರೈಲು ಹೊರಡುವಷ್ಟರಲ್ಲಿ ರೈಲು ನಿಲ್ದಾಣ ಪೂರ್ತಿ ಖಾಲಿಯಾಗಿತ್ತು. ಬರಿ ಸಾಮಾನುಗಳನ್ನು ಸಾಗಿಸುವ ರೈಲ್ವೇ ಸಿಬ್ಬಂದಿಯನ್ನು ಬಿಟ್ಟು ಬೇರೆ ಯಾರೂ ಅಲ್ಲಿ ಕಾಣಲಿಲ್ಲ. ಆಗಲೇ ಅನಿಸಿದ್ದು, ನಮ್ಮ ಜೀವನವೂ ಇಷ್ಟೇ, ರೈಲು ನಿಲ್ದಾಣದಂತೆ. ಅನೇಕರ ಆಗಮವಾದರೂ, ಅವರವರ ರೈಲುಗಳು ಬಂದಾಗ, ಕೆಲವರು ಹೇಳಿ ಹೊರಟರೆ ಇನ್ನು ಕೆಲವರು ಹೇಳದೆಯೇ ಹೊರಟುಹೋಗುತ್ತಾರೆ. ಕೊನಗೆ ನಮ್ಮ ಜೀವನ ಒಂಟಿ ರೈಲು ನಿಲ್ದಾಣದಂತೆ ಖಾಲಿ ಖಾಲಿ.
ಬರುವಾಗಲೂ ಒಬ್ಬಂಟಿ
ಹೋಗುವಾಗಲೂ ಒಬ್ಬಂಟಿ
ನಡುವೆ ಬಾಂಧವ್ಯಗಳ, ಭಾವನೆಗಳ ಸರಮಾಲೆಹೊತ್ತು
ತಿರುಗುವ ಆತುರದಲ್ಲಿ
ಪ್ರಕೃತಿ ಸತ್ಯವನ್ನೇ ಮರೆತು ವೇಗದಿಂದ ಮುನ್ನುಗ್ಗುತ್ತೇವೆ,
ಇದ್ದಕ್ಕಿದ್ದಂತೆ ಒಂಟಿ ಎಂಬ ಸತ್ಯ
ಎದುರು ಗೋಚರಿಸಿದಾಗ ಮತ್ತೆ ಕುಗ್ಗಿ ಬಾಗುತ್ತೇವೆ.
ಹೀಗೆ ಯೋಚಿಸುತ್ತಾ ಕಿಟಕಿಗೆ ಆನಿಕೊಂಡು ಕುಳಿತವನಿಗೆ ನಿದ್ದೆ ಯಾವಾಗ ಹತ್ತಿತು ಎಂಬುದು ಗೊತ್ತಾಗಲಿಲ್ಲ. ಆದರೆ ಎಚ್ಚರಗೊಂಡ ಮೇಲೂ ಅದೇ ಸಾಲುಗಳು ನನ್ನನ್ನು ಇನ್ನೂ ಕಾಡುತ್ತಿವೆ.

Sunday, November 24, 2013

ಅವಧಿಯಲ್ಲಿ ನನ್ನ ಮತ್ತು ಸ್ನೇಹಿತೆ ಮಂಜುಳಳ ಢುಂಢಿ ಕುರಿತ ಅಭಿಪ್ರಾಯ 5sep-13 ರಂದು ಪ್ರಕಟಗೊಂಡಿತ್ತು...

‘ಢುಂಢಿ’ ವಿವಾದ: ಇಬ್ಬರು ವಿದ್ಯಾರ್ಥಿಗಳು ಕಂಡಂತೆ

September 5, 2013
by G
ಢುಂಢಿ ವಿವಾದಾತ್ಮಕ ಕೃತಿಯಾಗಬೇಕಿರಲಿಲ್ಲ
ಮಂಜುಳ ಹುಲಿಕುಂಟೆ
ಬದುಕು ಕಮ್ಯುನಿಟಿ ಕಾಲೇಜ್
ಯೋಗೇಶ್ ಮಾಸ್ಟರ್ ರವರ ‘ಢುಂಢಿ’ ಕೃತಿಯು ಒಂದು ವೈಚಾರಿಕ ಕೃತಿಯಾಗಿದ್ದು ಮಿಶ್ರ ಪ್ರತಿಕ್ರಿಯೆಗಳಿಗೆ ಆಸ್ಪದ ಮಾಡಿಕೊಟ್ಟಿರುವುದು ಪ್ರಜ್ಞಾವಂತರು ಗಮನಿಸಬೇಕಾದ ಅಂಶವಾಗಿದೆ. ಪ್ರಾಚೀನ ಹಿಂದೂ ಧರ್ಮ ಗ್ರಂಥಗಳಲ್ಲಿ ದೇವರಾಗಿ ಪ್ರಥಮ ಪೂಜೆ ಪಡೆಯುತ್ತಿರುವ ಗಣಪತಿಯ ಹುಟ್ಟಿನ ಬಗ್ಗೆ ಅನೇಕರಿಗೆ ಇರುವ ಅನುಮಾನ ಇಂದು ನೆನ್ನೆಯದಲ್ಲ. ಗಣಪತಿ ಎಂದರೆ ಒಂದು ಗುಂಪಿನ ನಾಯಕ ಆತ ಒಬ್ಬ ಕಾಡುಮಾನವ(ಡ್ರಾವಿಡ ವ್ಯಕ್ತಿ) ಆತನಿಂದ ದೇವಾನುದೇವತೆಯರ ಕೆಲವು ಕೆಲಸಗಳಿಗೆ ವಿಘ್ನಬರುತ್ತಿದ್ದರಿಂದ ಆತನಿಗೆ ಈ ದೈವತ್ವದ ಆಮಿಷ ಒಡ್ಡಿ ಆತನನ್ನು ಗಣಪತಿಯಾಗಿಸಿ ತಮ್ಮ ಕಾರ್ಯದಲ್ಲಿ ಯಶಸ್ವಿಯಾದರು ಎಂಬುದನ್ನು. ಅನೇಕ ಬಾರಿ ಇಂತಹ ವಾದವನ್ನು ನಾನು ಕೇಳಿದ್ದೇನೆ.
ಹಾಗೆ ನೋಡಿದರೆ ಸಿದ್ದಲಿಂಗಯ್ಯ ಕಂಬಾಳುರವರ ‘ಮೈಥಿಲಿ’ ಕೂಡ ಇಂತಹದ್ದೇ ಒಂದು ವೈಚಾರಿಕ ಕೃತಿ ಇಂತಹ ಅನೇಕ ಕೃತಿಗಳು ಈಗಾಗಲೇ ಬಂದಿವೆ. ಅಂತಹದ್ದರಲ್ಲಿ ‘ಢುಂಡಿ’ ಕೃತಿಯನ್ನು ಸರಿಯಾಗಿ ಅಥರ್ೈಸಿಕೋಳ್ಳುವ ಮೋದಲೇ ಯೋಗೇಶ್ ಮಾಸ್ಟರ್ ರವರನ್ನು ಬಂಧಿಸಿದ್ದು ಸರಿಯಲ್ಲ. ಇಂತಹ ವರ್ತನೆಗಳಿಂದ ವೈಚಾರಿಕ ಮನಸ್ಸುಗಳಿಗೆ ಘಾಸಿಮಾಡುವ ಮೂದಲು ಕೃತಿಯ ಸಮಗ್ರ ಅಧ್ಯನಮಾಡಿ ಕ್ರಮ ಕೈ ಗೊಳ್ಳಬೇಕಿತ್ತು.ಇಂಥಹ ಅವಗಢಗಳ ಕುರಿತು ಪ್ರಜ್ಞಾವಂತರು ಇನ್ನಾದರೂ ಚಿಂತಿಸುವಂತಾಗಲಿ.
 

ಢುಂಢಿ ವಿಚಾರ… ವಿವಾದ…!
ಕೆ ನವೀನ್ ಕಮಾರ್
ಬದುಕು ಕಮ್ಯೂನಿಟಿ ಕಾಲೇಜು

ಭಾರತದ ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ತಮ್ಮ ಅಭಿಪ್ರಾಯಗಳನ್ನು, ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ಅಥವ ಹೇಳುವ ಹಕ್ಕನ್ನು ಸಂವಿಧಾನ ನೀಡಿದೆ. ಆದರೆ ಅವರ ಯಾವ ಅನಿಸಿಕೆ ಅಭಿಪ್ರಾಯಗಳೇ ಆಗಲಿ ಅದು ಅವರ ವೈಯಕ್ತಿಕವಾಗಿರುತ್ತದೆ ಮತ್ತು ಅದನ್ನು ಅವರು ಯಾರ ಮೇಲೂ ಬಲವಂತವಾಗಿ ಹೇರುವ ಹಾಗಿಲ್ಲ.
ಒಬ್ಬ ಸಾಮಾನ್ಯ ವ್ಯಕ್ತಿಯು ತನ್ನ ಅಭಿಪ್ರಾಯಗಳನ್ನು ತನ್ನ ಸ್ನೇಹಿತರ ಬಳಗದೊಂದಿಗೆ ಹಂಚಿಕೊಳ್ಳಬಹುದು ಹಾಗೆಯೇ ಒಬ್ಬ ಕಥೆಗಾರ ತನ್ನ ಕಥೆಗಳ ಮೂಲಕ ಮತ್ತು ಕವಿಗಳು ತಮ್ಮ ಕವಿತೆಯ ಮೂಲಕ ತಮ್ಮ ವಿಚಾರಗಳನ್ನು ಆಸಕ್ತರೊಂದಿಗೆ ಹಂಚಿಕೊಳ್ಳುತ್ತಾರೆ. ಅವರ ಅಭಿಪ್ರಾಯಗಳನ್ನು ಒಪ್ಪುವುದು ಬಿಡುವುದು ಅದನ್ನು ಕೇಳುವವರ, ಓದುವವರ ವಿವೇಚನೆಗೆ ಬಿಟ್ಟದ್ದು. ಯಾರ ಮೇಲೂ ಯಾರೂ ತಮ್ಮ ವಿಚಾರಗಳನ್ನು ಬಲವಂತಾಗಿ ಹೇರುವುದಿಲ್ಲ. ಹಾಗೆಯೇ ಇಂತಹ ವಿಚಾರಗಳನ್ನು ಪಡೆದುಕೊಳ್ಳುವವರು ಸಹ ಪ್ರತಿಕ್ರಯೆಗಳನ್ನು ನೀಡಬಹುದೇ ವಿನಹ ಯಾರ ಅಭಿವ್ಯಕ್ತಿ ಸ್ವಾತಂತ್ರಯವನ್ನೂ ಕಸಿದುಕೊಳ್ಳುವ ಹಕ್ಕು ಅವರಿಗಿರುವುದಿಲ್ಲ.
ಆದರೆ ಇತ್ತೀಚಿಗೆ ಢುಂಢಿ ಕಾದಂಬರಿ ಕುರಿತಂತೆ ಆಗುತ್ತಿರುವುದೇ ಬೇರೆ. ಢುಂಢಿಯ ಕಾದಂಬರಿಕಾರ ಯೋಗೇಶ್ ಮಾಸ್ಟರ್ ತಮ್ಮ ಕಾದಂಬರಿಯಲ್ಲಿ ಹಿಂದುಗಳ ನಂಬಿಕೆಗೆ ಚ್ಯುತಿ ತಂದಿದ್ದಾರೆ, ಅವರು ಹಿಂದು ದೇವತೆ ಶ್ರೀ ಗಣೇಶನನ್ನು ಕ್ರೂರಿ, ರಕ್ಕಸ ಎಂಬಂತೆಲ್ಲಾ ಚಿತ್ರಿಸಿದ್ದಾರೆ ಎಂದು ಹಲವು ಪ್ರತಿಭಟನೆಗಳನ್ನು ಮತ್ತು ಅವರ ವಿರುದ್ಧ ವಾಕ್ಸಮರವನ್ನು ಅನೇಕ ಹಿಂದು ಧರ್ಮ ಸಂಘಟನೆಗಳು ನಡೆಸಿದವು. ಇಲ್ಲಿಯವರೆಗೂ ಎಲ್ಲವೂ ಸರಿ ಇತ್ತೆಂದೇ ಹೇಳಬಹುದು. ಹೇಗೆ ಯೋಗೇಶ್ ಮಾಸ್ಟರ್ಗೆ ತಮ್ಮ ವಿಚಾರಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆಯೋ ಹಾಗೆಯೇ ಇತರರಿಗೂ ಅವರ ಅಭಿಪ್ರಾಯಗಳನ್ನು ತಿಳಿಯಪಡಿಸುವ ಸಾಂವಿಧಾನಿಕ ಹಕ್ಕಿದೆ.
ಆದರೆ ನಿಜವಾದ ಎಡವಟ್ಟು ಆಗಿದ್ದು ಕಾದಂಬರಿಕಾರ ಯೋಗೇಶ್ ಮಾಸ್ಟರ್ ಬಂಧನವಾದಾಗ. ಯಾವ ಸ್ವಾತಂತ್ರ್ಯವನ್ನು ಸಂವಿಧಾನ ನಮಗೆ ಕೊಟ್ಟಿದೆಯೋ ಅದನ್ನು ನಮ್ಮ ಸಕರ್ಾರಗಳು ಕೇವಲ ಕೆಲವು ಹಿತಾಸಕ್ತಿಗಳನ್ನು ಓಲೈಸಿಕೊಳ್ಳಲು ಅಥವಾ ತಮ್ಮ ಬೇಳೆ ಕಾಳು ಬೇಯಿಸಿಕೊಳ್ಳಲು ಕಸಿದುಕೊಳ್ಳುವುದು ಎಷ್ಟು ಸೂಕ್ತ? ಇಲ್ಲಿ ಯೋಗೇಶ್ ಮಾಸ್ಟರ್ರವರು ಏನನ್ನು ಹೇಳಿದ್ದಾರೆ ಅಥವಾ ಅವರು ಹೇಳಿರುವುದು ಯಾವ ಆಧಾರದ ಮೇಲೆ? ಎಂದು ತಿಳಿದುಕೊಂಡು ಮುಂದುವರಿದಿದ್ದರೆ ಬಹುಶ: ಇಂದು ಅವರ ಬಂಧನ ಇಷ್ಟು ದೊಡ್ಡಮಟ್ಟದ ವಿವಾದವಾಗುತ್ತಿರಲಿಲ್ಲ ಅನಿಸುತ್ತದೆ. ಒಂದೊಮ್ಮೆ ಅವರು ಇಲ್ಲಿ ಗಣೇಶನನ್ನು ಕೆಟ್ಟದಾಗಿ ಅಥವ ದುಷ್ಟ, ಕ್ರೂರಿ ಎಂದು ಚಿತ್ರಿಸಿದ್ದಾರೆಂದೇ ಅಂದುಕೊಂಡರೂ ಅದಕ್ಕೆ ಅವರು ಆಧಾರವಾಗಿಟ್ಟುಕೊಂಡು ಅಧ್ಯಯನ ನಡೆಸಿದ ಕೃತಿಗಳೂ ಪ್ರಭಾವ ಬೀರಿರುತ್ತವೆ. ಅಂದರೆ ಆ ಕೃತಿಗಳನ್ನೋ ಅಥವ ಕಾದಂಬರಿಯನ್ನೋ ಬೇರೆ ಇನ್ನೊಬ್ಬ ವ್ಯಕ್ತಿಯು ಬರೆದಿರುತ್ತಾನೆ. ಅಂದ ಮೇಲೆ ಅವನ ವಿರುದ್ಧ ನಡೆಯದ ಹೋರಾಟಗಳು, ಅವನ ವಿರುದ್ಧ ನಡೆಯದ ಟೀಕೆಗಳು ಕೇವಲ ಯೋಗೇಶ್ ಮಾಸ್ಟರ್ರವರ ವಿರುದ್ಧ ಮಾತ್ರ ಏಕೆ ನಡೆಯಬೇಕು?
ಯೋಗೇಶ್ರವರು ತಾವು ಕಂಡಂತೆ ಅಥವಾ ತಾವು ತಿಳಿದಂತೆ ಸಂದರ್ಭಕ್ಕನುಸಾರವಾಗಿ ಓದುಗನಿಗೆ ವ್ಯಕ್ತಿ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ಅದು ಒಪ್ಪುವುದು ಬಿಡುವುದು ಓದುಗನಿಗೆ ಬಿಟ್ಟದ್ದು. ಆದ್ದರಿಂದ ಕೇವಲ ತಮ್ಮ ರಾಜಕೀಯ ದಾಳಗಳನ್ನು ಉಳಿಸಿಕೊಳ್ಳಲು ಮತ್ತು ಬಿಟ್ಟಿ ಪ್ರಚಾರಕ್ಕಾಗಿ ತಮ್ಮ ಅಭಿಪ್ರಾಯಗಳನ್ನು ಬಲವಂತವಾಗಿ ಎಲ್ಲರ ಮೇಲೂ ಹೇರುವ ಹುಂಬತನವನ್ನು ಈ ಸೋಕಾಲ್ಡ್ ಸಂಘಟನೆಗಳು ಇಲ್ಲಿಗೇ ನಿಲ್ಲಿಸಿ, ನಿಜವಾದ ಸಮಾಜ ಸುಧಾರಣೆಯಲಿ ತೊಡಗಿಕೊಂಡರೆ ಎಲ್ಲ ಸಮುದಾಯ, ಸಮಾಜದವರಿಗೂ ಒಳಿತಾದೀತು.